More

    ಕಲ್ಲಿನಿಂದ ಜಜ್ಜಿ ಮಹಿಳೆಯ ಭೀಕರ ಹತ್ಯೆ

    ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಗಂಜಾಂನಲ್ಲಿ ಭಾನುವಾರ ತಡರಾತ್ರಿ ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಲಾಗಿದೆ.

    ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ತಲಪತಿನಗರದ ಗಂಗಮ್ಮ (48) ಕೊಲೆಯಾದ ಮಹಿಳೆ. ಅಲೆಮಾರಿ ಜನಾಂಗಕ್ಕೆ ಸೇರಿದ ಈಕೆ, ಕಾವೇರಿ ನದಿಯಲ್ಲಿ ಕಾಸು ಹುಡುಕುವುದು ಹಾಗೂ ಸ್ಟೌ ರಿಪೇರಿ ಮಾಡುವ ಕಾಯಕ ಮಾಡಿಕೊಂಡಿದ್ದರು. ಇದೇ ಕಾಯಕ ಮಾಡುವ ತನ್ನ ಕುಟುಂಬದ 25ಕ್ಕೂ ಹೆಚ್ಚು ಸದಸ್ಯರೊಂದಿಗೆ ಕಳೆದ 1 ತಿಂಗಳ ಹಿಂದೆ ಗಂಜಾಂ ಗ್ರಾಮಕ್ಕೆ ಆಗಮಿಸಿ ಬೆಂ-ಮೈ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕೆಳಭಾಗದಲ್ಲಿ ಆಶ್ರಯ ಪಡೆದಿದ್ದರು.

    ಭಾನುವಾರ ತಡರಾತ್ರಿ ಒಬ್ಬರೇ ಹೊರಗೆ ಹೋಗಿದ್ದು, ಸೋಮವಾರ ಮುಂಜಾನೆ ಗಂಜಾಂ ಪ್ರವೇಶಿಸುವ ರಸ್ತೆ ಪಕ್ಕದ ಟೀ ಕ್ಯಾಂಟೀನ್ ಹಿಂಭಾಗದಲ್ಲಿ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಹಿಳೆಯ ತಲೆ ಹಾಗೂ ಮುಖವನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಟೀ ಕ್ಯಾಂಟೀನ್ ಮಾಲೀಕರು ಅಂಗಡಿ ತೆರೆಯಲು ಸೋಮವಾರ ಮುಂಜಾನೆ ಆಗಮಿಸಿದ್ದ ವೇಳೆ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಸ್ಥಳಿಯರ ನೆರವಿನೊಂದಿಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

    ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಟೌನ್ ಠಾಣೆ ಇನ್ಸ್‌ಪೆಕ್ಟರ್ ಬಿ.ಎಸ್.ಪ್ರಕಾಶ್, ಪಿಎಸ್‌ಐ ಶಿವಲಿಂಗ ದಳವಾಯಿ ಹಾಗೂ ಶ್ವಾನದಳ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಪರಿಶೀಲಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಮಂಡ್ಯ ಜಿಲ್ಲಾ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ವರಿಷ್ಠಾಧಿಕಾರಿ ತಿಮ್ಮಯ್ಯ ಹಾಗೂ ಡಿವೈಎಸ್ಪಿ ಮುರುಳಿ ನೇತೃತ್ವದಲ್ಲಿ ಸ್ಥಳದಲ್ಲಿದ್ದ ಈಕೆಯ 8 ಜನ ಮಕ್ಕಳು ಹಾಗೂ ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಿದರು.

    ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts