ಮೂಡಲಗಿ, ಬೆಳಗಾವಿ: ಬೇರೆ ಬೇರೆ ದೇಶದಲ್ಲಿ ಸಾಧನೆ ಮಾಡಿ ಉತ್ತಮ ಹುದ್ದೆಯಲ್ಲಿ ಇರುವಂತವರು ನಮ್ಮ ಹೆಮ್ಮೆಯ ಭಾರತೀಯರು. ರಾಜ್ಯದ ಕನ್ನಡ ಶಾಲೆಗಳಲ್ಲಿ ಶಿಕ್ಷಣ ಕಲಿತಂಥಹ ವಿದ್ಯಾರ್ಥಿಗಳು ಬೇರೆ ದೇಶಗಳಲ್ಲಿ ಸಂಶೋಧನೆ ಮಾಡುತ್ತಿರುವುದು ನಮ್ಮ ಕನ್ನಡಿಗರ ಹಮ್ಮೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದರು.
ತಾಲೂಕಿನ ಕಲ್ಲೋಳಿ ಪಟ್ಟಣದ ಶತಮಾನ ಕಂಡ ಸರ್ಕಾರಿ ಶಾಲೆಯಲ್ಲಿ ಯುವಾ ಬ್ರಿಗೇಡ್ ವತಿಯಿಂದ ಶನಿವಾರ ಆಯೋಜಿಸಲಾದ ಸರ್ಕಾರಿ ಕನ್ನಡ ಶಾಲೆಯ ಜೀರ್ಣೋದ್ಧಾರ ಹಾಗೂ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸಾಕಷ್ಟು ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆ ಇರುವಂತಹ ಸಂದರ್ಭದಲ್ಲಿ ಕಲ್ಲೋಳಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯು 137 ವರ್ಷ ಪೂರೈಸಿದೆ. ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಮಕ್ಕಳ ದಾಖಲಾತಿಯಲ್ಲಿಯೂ ಸಹ ದಾಖಲೆ ಮಾಡಿದ್ದು ಸಂತಸ. ಮುಂದಿನ ದಿನಮಾನಗಳಲ್ಲಿ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಕನ್ನಡ ಜತೆಗೆ ಇಂಗ್ಲಿಷ್ ಶಿಕ್ಷಣವನ್ನು ತರುವಂತ ಪ್ರಯತ್ನವನ್ನು ಈಗಾಗಲೇ ಮಾಡುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಆಯೋಜನೆಯನ್ನು ಮೊದಲು ಈ ಶಾಲೆಯಲ್ಲೇ ಪ್ರಾರಂಭಿಸಲಾಗುವುದು ಹಾಗೂ ಈ ಶಾಲೆಯನ್ನು ಪ್ರೌಢ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದರು.
ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ನಾಡಿನ ಶಾಲಾ ಮಕ್ಕಳಿಗೆ ವಿಜ್ಞಾನದ ಪ್ರಯೋಗಗಳನ್ನು ಯುವಾ ಬ್ರಿಗೇಡ್ ತಲುಪಿಸುವ ಪ್ರಯತ್ನ ಮಾಡಿತ್ತು.
ಅದರ ಮುಂದಿನ ಭಾಗವಾಗಿ ಸೈನ್ಸ್ ಲ್ಯಾಬ್ ನಿರ್ಮಿಸಲು ಆಯ್ದುಕೊಂಡಿದ್ದೇ ಕಲ್ಲೋಳಿ ಪಟ್ಟಣದ ಶತಮಾನ ಕಂಡ ಶಾಲೆಯನ್ನು ಪ್ರಯೋಗಾಲಯ ಸ್ಥಾಪನೆಗೆ ಸೂಕ್ತ ಕಟ್ಟಡದ ಕೊರತೆ ಉಂಟಾದ ಸಂದರ್ಭದಲ್ಲಿ ಗ್ರಾಮಸ್ಥರು ಸ್ವಂತ ತಾವೇ ಶಾಲೆಯ ಅಭಿವೃದ್ಧಿಗೆ ಮುಂದಾಗಿ ಸುಸಜ್ಜಿತವಾದ ಶಾಲೆಯನ್ನಾಗಿ ಮಾಡಿರುವ ಗ್ರಾಮಸ್ಥರ ಕಾರ್ಯ ನಿಜಕ್ಕೂ ಮೆಚ್ಚುವಂತದು ಎಂದರು.
ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನಮಠ ಶಿವಲಿಂಗೇಶ್ವರ ಸ್ವಾಮೀಜಿ, ಶಿವಪ್ಪ ಬೆಳಕೋಡ, ತಹಸೀಲ್ದಾರ್ ಡಿ.ಜಿ. ಮಹಾತ್ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಯುವಾ ಬ್ರಿಗೇಡ್ ಕಾರ್ಯಕರ್ತರು, ಪಟ್ಟಣದ ಸಾರ್ವಜನಿಕರು ಉಪಸ್ಥಿತರಿದ್ದರು.