ಯುವ ಸಮೂಹಕ್ಕೆ ಸುರೇಶ್ ಎನ್.ಋಗ್ವೇದಿ ಸಲಹೆ
ಕೊಳ್ಳೇಗಾಲ: ಕನ್ನಡದ ಪತ್ರಿಕೆ, ಪುಸ್ತಕ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ನ ಚಾಮರಾಜನಗರ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ತಿಳಿಸಿದರು.
ಪಟ್ಟಣದ ಎಸ್ವಿಕೆ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಪುಟ್ಟನಂಜಮ್ಮ ರಾಚೇಗೌಡರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಶ್ರೇಷ್ಠ ಪರಂಪರೆ ಹೊಂದಿರುವ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಯುವಶಕ್ತಿ ಪೂರ್ಣವಾಗಿ ತಿಳಿಸುವ ಕಾರ್ಯ ಮಾಡಬೇಕಿದೆ. ಪಠ್ಯದ ಜತೆಗೆ ಸಾಹಿತ್ಯಾಭಿರುಚಿಯನ್ನೂ ಬೆಳೆಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಬಾಲ್ಯದಿಂದಲೇ ಪುಸ್ತಕ, ಪತ್ರಿಕೆಯನ್ನು ನಿತ್ಯ ಓದುವ ಅಭ್ಯಾಸ ಬೆಳೆಸಿಕೊಂಡಾಗ ಕನ್ನಡದ ಶಬ್ದ ಸಂಪತ್ತು ಹೆಚ್ಚು ಅರಿವಿಗೆ ಬರುತ್ತದೆ. ಇದು ಸಾಹಿತ್ಯ ರಚನೆಗೆ ಅಪಾರ ಪ್ರೋತ್ಸಾಹ ನೀಡುತ್ತದೆ. 18 ವರ್ಷ ತುಂಬಿದ ಪ್ರತಿಯೊಬ್ಬರೂ ಸಾಹಿತ್ಯ ಪರಿಷತ್ನ ಆಜೀವ ಸದಸ್ಯರಾಗುವ ಮೂಲಕ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಕಾರ್ಯ ಮಾಡಬೇಕಿದೆ ಎಂದರು.
ನಿವೃತ್ತ ಉಪನ್ಯಾಸಕ ಚೆನ್ನಮಾದೇಗೌಡ, ಕನ್ನಡ ಸಾಹಿತ್ಯ ಪರಿಷತ್ನ ತಾಲೂಕು ಅಧ್ಯಕ್ಷ ನಾಗರಾಜು, ಉಪ ಪ್ರಾಂಶುಪಾಲ ವಿಶ್ವನಾಥ್, ಮಾಜಿ ಶಾಸಕ ರಾಜೇಗೌಡರ ಪುತ್ರಿ ಕಾತ್ಯಾಯಿನಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಲೆಕ್ಸಾಂಡರ್, ಉಪನ್ಯಾಸಕ ಕಾಂತರಾಜು ಇದ್ದರು.