ಕಾರವಾರ: ಸಂದರ್ಭ ಬಂದಲ್ಲಿ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲ ತೀರ ರಕ್ಷಣೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಬದ್ಧ ಎಂದು ಸುಪ್ರೀಂ ಕೋರ್ಟ್ ವಕೀಲ ದೇವದತ್ತ ಕಾಮತ್ ಹೇಳಿದರು.
ಇಲ್ಲಿನ ಕಡಲ ತೀರದಲ್ಲಿ ಶನಿವಾರ ಆಯೋಜಿಸಿದ್ದ ಮೀನುಗಾರರ ಸಭೆಯಲ್ಲಿ ಅವರು ಮಾತನಾಡಿದರು.
ರವೀಂದ್ರನಾಥ ಟ್ಯಾಗೋರರಿಗೆ ಪ್ರೇರಣೆ ನೀಡಿದ ಕಾರವಾರ ಕಡಲ ತೀರ ರತ್ನ, ಅದು ನಮ್ಮ ಆಸ್ತಿ. ಮುಂದಿನ ಜನಾಂಗಕ್ಕೆ ಅದನ್ನು ಉಳಿಸಬೇಕಾಗಿದೆ.
ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದ ಕಾಳಿ ನದಿಯ ಐದು ಕಿಮೀ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಂಡಿದ್ದರಿಂದ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಹೈಕೋರ್ಟ್ ಕಾಮಗಾರಿಗೆ ತಡೆ ನೀಡಿದೆ. ಸಂಪೂರ್ಣ ಕಾಮಗಾರಿಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ
ಹೈಕೋರ್ಟ್ಗೆ ಎಲ್ಲ ದಾಖಲೆಗಳನ್ನು ನೀಡಲಾಗುವುದು ಎಂದರು.
ತಾಲೂಕಿನ ಮೀನುಗಾರರಿಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಅಧಿಕಾರ ಬಲದಿಂದ ಬಂದರು ವಿಸ್ತರಣೆ ಯೋಜನೆ ಕೈಗೊಳ್ಳಲಾಗಿದೆ. ಇಡೀ ಕಾರವಾರ ಜನತೆ ಒಂದಾಗಿ ಇದರ ವಿರುದ್ಧ ಹೋರಾಡಬೇಕು. ಜನಬಲದ ಎದುರು ಅಧಿಕಾರ ಬಲ ಕುಗ್ಗಬೇಕು ಎಂದರು.
ಮೀನುಗಾರರ ಪರವಾಗಿ ಹೈಕೋರ್ಟ್ನಲ್ಲಿ ವಾದ ಮಂಡಿಸಿದ ಕಾರವಾರ ಮೂಲದ ವಕೀಲ ಮೂರ್ತಿ ನಾಯ್ಕ, ಸುಪ್ರೀಂ ಕೋರ್ಟ್ ವಕೀಲ ದೇವದತ್ತ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ಪರಿಸರ ಹೋರಾಟಗಾರ ಸುರೇಶ ಹೆಬ್ಳೀಕರ್, ಹಿರಿಯ ವಕೀಲ ಎಸ್.ಪಿ. ಕಾಮತ್, ಮಾಜಿ ಶಾಸಕ ಸತೀಶ ಸೈಲ್, ರಾಜ್ಯ ರೈತ ಸಂಘದ ನಂಜುಂಡಸ್ವಾಮಿ ಬಣದ ಮಂಜೇಗೌಡ, ಮೀನುಗಾರರ ಮುಖಂಡರಾದ ಗಣಪತಿ ಮಾಂಗ್ರೆ, ರಾಜು ತಾಂಡೇಲ, ಪ್ರಸಾದ ಕಾರವಾರಕರ್, ಸುಶೀಲಾ ಹರಿಕಂತ್ರ ಇತರರು ಇದ್ದರು.
ಸಭೆಗೂ ಪೂರ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು.</