ಹಿರೇಬಾಗೇವಾಡಿ: ತಾಡಪತ್ರಿ ವಿತರಣೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ನಿರ್ಲಕ್ಷೃ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹೋಬಳಿ ಮಟ್ಟದ ರೈತರು ಮಂಗಳವಾರ ಕೃಷಿ ಕೇಂದ್ರಕ್ಕೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ರೈತರಿಗೆ ತಾಡಪತ್ರಿ ವಿತರಿಸುವುದಾಗಿ ಇಲ್ಲಿನ ಕೃಷಿ ಕೇಂದ್ರದ ಸೂಚನಾ ಫಲಕದಲ್ಲಿ ಅಳವಡಿಸಲಾದ ನೋಟಿಸ್ ಗಮನಿಸಿದ ಸುಮಾರು 50 ರಿಂದ 60 ರೈತರು ಬುಧವಾರ ಬೆಳಗ್ಗೆ ದಾಖಲೆ ಸಮೇತ ತಾಡಪತ್ರಿ ಪಡೆಯಲು ಕೃಷಿ ಕೇಂದ್ರಕ್ಕೆ ಆಗಮಿಸಿದ್ದರು. ಆದರೆ, ಅಧಿಕಾರಿಗಳು ಮಾತ್ರ, ಇಂದು ದಾಖಲೆ ನೀಡಿ, ಸೋಮವಾರದಿಂದ ಗ್ರಾಪಂ ಪ್ರಕಾರ ಪಟ್ಟಿ ತಯಾರಿಸಿ ಅದರಂತೆ ವಿತರಣೆ ಮಾಡುತ್ತೇವೆ ಎಂದು ತಿಳಿಸಿದರು.
ಇದರಿಂದ ಕೋಪಗೊಂಡ ರೈತರು ಈಗಾಗಲೆ ಕೆಲ ರೈತರಿಗೆ ಯಾವ ಆಧಾರದ ಮೇಲೆ ತಾಡಪತ್ರಿ ಹಂಚಿಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ನಂತರ, ಕೃಷಿ ಇಲಾಖೆಯಲ್ಲಿನ ತಾಡಪತ್ರಿ ಎಣಿಸಿದಾಗ 16 ತಾಡಪತ್ರಿಗಳು ಕಡಿಮೆ ಇರುವುದು ಕಂಡು ಬಂದಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೃಷಿಕರು ಹಾಗೂ ಅಧಿಕಾರಿಗಳ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ನಂತರ ರೈತರು ವಿಷಯವನ್ನು ಕೃಷಿ ಇಲಾಖೆ ಜಂಟಿ ನಿರ್ದೇಶಕರ ಗಮನಕ್ಕೆ ತಂದರು. ಜಂಟಿ ನಿರ್ದೇಶಕರ ಸೂಚನೆ ಮೇರೆಗೆ ಸ್ಥಳಕ್ಕೆ ಆಗಮಿಸಿದ ಸಹಾಯಕ ಕೃಷಿ ಅಧಿಕಾರಿ ಆರ್.ಬಿ.ನಾಯ್ಕರ ಅರ್ಹ ರೈತರಿಗೆ ತಾಡಪತ್ರಿ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿ, ಪರಿಸ್ಥಿತಿ ತಿಳಿಗೊಳಿಸಿದರು.