ಮುಂಡಗೋಡ: ತಾಲೂಕಿನ ಓಣಿಕೇರಿ ಮತ್ತು ಓರಲಗಿ ಗ್ರಾಮದ ಸಮೀಪ ಕಾಡಾನೆಯೊಂದು ಮಂಗಳವಾರ ಬೆಳಗ್ಗೆ ಕಾಣಿಸಿಕೊಂಡು ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದ ಘಟನೆ ನಡೆದಿದೆ. ಅಂದಾಜು 6ರಿಂದ 8 ವರ್ಷದ ಗಂಡು ಕಾಡಾನೆಯಾಗಿದೆ. ಹಿಂಡಿನಿಂದ ತಪ್ಪಿಸಿಕೊಂಡು ನೀರನ್ನು ಅರಸುತ್ತ ಬಂದು ಓರಲಗಿಯಿಂದ ಓಣಿಕೇರಿಗೆ ಹೋಗುವ ಮಾರ್ಗ ಮಧ್ಯದ ಗದ್ದೆ ಬಳಿಯ ರಸ್ತೆಯಲ್ಲಿ ಓಡಾಡಿದೆ. ಕಾಡಾನೆಯನ್ನು ಕಂಡ ಗ್ರಾಮಸ್ಥರು ಗಾಬರಿಯಾಗಿದ್ದಾರೆ. ಆದರೆ, ಕಾಡಾನೆ ಮಾತ್ರ ಗ್ರಾಮಸ್ಥರಿಗೆ ಏನೂ ತೊಂದರೆ ಕೊಟ್ಟಿಲ್ಲ. ನಂತರ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯವರು ಗ್ರಾಮಸ್ಥರ ಸಹಾಯದಿಂದ ಕಾಡಾನೆಯನ್ನು ಅರಣ್ಯದತ್ತ ಓಡಿಸಿದ್ದಾರೆ.
ಸುಮಾರು 7-8 ಆನೆಗಳ ಹಿಂಡು ಈ ಭಾಗದಲ್ಲಿ ಇನ್ನೂ ಬೀಡು ಬಿಟ್ಟಿದೆ. ಪ್ರತಿ ವರ್ಷದಂತೆ ಇಷ್ಟೊತ್ತಿಗಾಗಲೇ ಇವು ಮರಳಿ ತಮ್ಮ ಮೂಲ ಸ್ಥಾನ ಸೇರಬೇಕಿತ್ತು. ಆದರೆ, ಈ ಬಾರಿ ಬೆಳೆ, ನೀರು ಚೆನ್ನಾಗಿ ಇರುವುದರಿಂದ ಮತ್ತು ಹಿಂಡಿನಲ್ಲಿ ಮರಿಯಾನೆಗಳು ಇರುವುದರಿಂದ
ಅವು ಮರಳುತ್ತಿಲ್ಲ.
| ಅಜಯ ನಾಯ್ಕ ಆರ್ಎಫ್ಒ ಕಾತೂರ
ಡೌಗಿನಾಲಾ ಗ್ರಾಮದ ಬಳಿ ಕಾಡಾನೆ ಪ್ರತ್ಯಕ್ಷ
ಯಲ್ಲಾಪುರ: ತಾಲೂಕಿನ ಡೌಗಿನಾಲಾ ಗ್ರಾಮದ ಬಳಿ ಕಾಡಾನೆ ಸಂಚರಿಸುತ್ತಿದೆ. ರಸ್ತೆಗಳಲ್ಲಿ ಯಾವುದೇ ವಾಹನಗಳ ಸಂಚಾರವಿಲ್ಲದ ಕಾರಣ ಯಲ್ಲಾಪುರ-ಹಳಿಯಾಳ ರಾಜ್ಯ ಹೆದ್ದಾರಿಯಲ್ಲೂ ಆನೆ ಯಾವ ಅಡ್ಡಿಯಿಲ್ಲದೆ ಸಂಚರಿಸಿತು. ಕಾಡಿನಲ್ಲಿ ನೀರು, ಆಹಾರದ ಸಮಸ್ಯೆ ಎದುರಾದಾಗ ನಾಡಿನತ್ತ ಕಾಡಾನೆಗಳು ಬರುವುದು ಈ ಭಾಗದಲ್ಲಿ ಹೊಸತೇನಲ್ಲ. ಆದರೆ, ಈ ಬಾರಿ ರಸ್ತೆಯಲ್ಲಿ ಓಡಾಡುವ ಜನತೆ ಭಯಪಡುವ ಸನ್ನಿವೇಶ ಇಲ್ಲ. ಡೌಗಿನಾಲಾ ಸುತ್ತ ಆನೆ ಓಡಾಡುತ್ತಿರುವಾಗ ಅರಣ್ಯ ಇಲಾಖೆಯ ಸಿಬ್ಬಂದಿ ಆನೆಯ ಜತೆ ಸೆಲ್ಪಿ ಕ್ಲಿಕ್ಕಿಸಿಕೊಂಡರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರ ಲಾಠಿ ಏಟು, ಬುದ್ಧಿವಾದ, ಶಿಕ್ಷೆಗಳಿಗೂ ಬೆದರದೇ ಜನ ಲಾಕ್ಡೌನ್ ನಿಯಮ ಉಲ್ಲಂಘಿಸುತ್ತಿರುವುದರಿಂದ, ನಿಯಂತ್ರಣಕ್ಕೆ ಗಜಪಡೆ ಕಾಲಿಡುತ್ತಿದೆ ಎಂಬ ಚಟಾಕಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ.