ಹಾಸನ: ತಾಲೂಕಿನ ಕೋರಲಗದ್ದೆ ಗ್ರಾಮದಲ್ಲಿ ಗುರುವಾರ ರಸ್ತೆ ದಾಟುತ್ತಿದ್ದ ಕಾಡಾನೆಗಳ ಹಿಂಡಿನ ಚಲನ ವಲನಗಳ ಬಗ್ಗೆ ಮಾಹಿತಿ ಪಡೆದು ವೀಕ್ಷಿಸುತ್ತಿದ್ದ ವಿಶೇಷ ಆನೆ ಕಾರ್ಯಪಡೆಯ ಸಿಬ್ಬಂದಿಯನ್ನು ಗುಂಪಿನಲ್ಲಿದ್ದ ಕಾಡಾನೆಯೊಂದು ಬೆನ್ನಟ್ಟಿ ಅಟ್ಟಾಡಿಸಿದೆ.
ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಕೊರಲಗದ್ದೆ, ಬಾಳಗುಲಿ, ಬ್ಯಾದನೆ, ಗುರ್ಗಿಹಳ್ಳಿ ಭೈರದೇವರ ಗುಡ್ಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ಈ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆ ಹಿಂಡುಗಳ ಚಲನ ವಲನಗಳನ್ನು ಗಮನಿಸಲು ಮತ್ತು ಮಾಹಿತಿ ಪಡೆಯಲು ತಾಲೂಕಿನಲ್ಲಿ ಅರಣ್ಯ ಇಲಾಖೆಯಿಂದ ವಿಶೇಷ ಆನೆ ಕಾರ್ಯಪಡೆ ನಿಯೋಜಿಸಲಾಗಿದೆ. ಈ ಸಿಬ್ಬಂದಿ ಗುರುವಾರ ಬೆಳಗ್ಗೆ ಕೋರಲಗದ್ದೆ ಗ್ರಾಮದಿಂದ-ಸೋಂಪುರ ಗ್ರಾಮದೆಡೆಗೆ ಕಾಡಾನೆಗಳು ತೆರಳುತ್ತಿರುವ ಮಾಹಿತಿ ಪಡೆದು ಅವುಗಳ ಚಲನ ವಲನ ಗಮನಿಸಲು ಮುಂದಾಗಿದ್ದಾರೆ.
ಗುಂಪಾಗಿ ಕಾಡಾನೆಗಳು ಸಾಗುತ್ತಿದ್ದ ಸಂದರ್ಭ ಗುಂಪಿನಲ್ಲಿದ್ದ ಕಾಡಾನೆಯೊಂದು ಆನೆ ಕಾರ್ಯಪಡೆ ಸಿಬ್ಬಂದಿಯನ್ನು ನೋಡಿದ್ದೆ ತಡ ಅವರನ್ನು ಸ್ವಲ್ಪ ದೂರದವರೆಗೂ ಓಡಿಸಿಕೊಂಡು ಹೋಗಿದೆ. ಆದರೆ, ಆನೆ ಕಾರ್ಯಪಡೆ ಸಿಬ್ಬಂದಿ ಮಾತ್ರ ಎದೆ ಗುಂದದೆ ಕಾಡಾನೆಯಿಂದ ತಪ್ಪಿಸಿ ಕೊಂಡಿದ್ದರಿಂದ ಕಾಡಾನೆ ಪುನ: ಕಾಡಾನೆಗಳ ಗುಂಪಿನೊಂದಿಗೆ ಸೇರಿಕೊಂಡು ಮುಂದೆ ಸಾಗಿತು. ವಿಷಯ ತಿಳಿದ ಗ್ರಾಮಸ್ಥರು ತಕ್ಷಣವೇ ತಾಲೂಕಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಬೇರೆಡೆಗೆ ಸಾಗಿಸಬೇಕು. ಅಥವಾ ಅವುಗಳು ವಾಪಸ್ ಬಾರದಂತೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದು ಸರ್ಕಾರ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.