ದಾವಣಗೆರೆ: ಮಾಜಿ ಶಾಸಕ ಎಸ್.ಎ.ರವೀಂದ್ರನಾಥ್ ಜತೆಗೆ ನಾನು ಯಾವ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.
ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಎಸ್.ಎ.ರವೀಂದ್ರನಾಥ್ ನಡುವೆ ವ್ಯತ್ಯಾಸವಿದೆ. ರವೀಂದ್ರನಾಥ್ ತೂಕವೇ ಬೇರೆ. ಆರೋಗ್ಯ ಸರಿ ಇಲ್ಲದಿದ್ದರೂ ಕೆಲಸ ಮಾಡಿರುವ ಅವರ ಬಗ್ಗೆ ಗೌರವ ಇದೆ. ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇನೆ ಎಂಬುದು ಅರ್ಥಹೀನ ಎಂದು ಸುದ್ದಿಗಾರರಿಗೆ ತಿಳಿಸಿದರು.
ಸ್ಮಾರ್ಟ್ಸಿಟಿ ಹಾಗೂ ವಿವಿಧ ಯೋಜನೆಗಳು, ಹಾಗೂ ಕರೊನಾ ಕಾಲದಲ್ಲಿ ಸಂಸದರು ಅವ್ಯವಹಾರ ಮಾಡಿದ್ದಾರೆ. ಅದರ ಆರೋಪವನ್ನು ಇದೀಗ ರವೀಂದ್ರನಾಥ್, ರೇಣುಕಾಚಾರ್ಯ, ಮಾಡಾಳು ವಿರುಪಾಕ್ಷಪ್ಪ ವಿರುದ್ಧ ಹೊರಿಸುತ್ತಿದ್ದಾರೆ. ಸಂಸದರು ತಪ್ಪು ಮಾಡಿಲ್ಲ ಎಂಬುದಾಗಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ರೇಣುಕಾಚಾರ್ಯ ಮೊದಲ ಬಾರಿಗೆ ನನ್ನನ್ನು ಮಾತನಾಡಿಸಿದ್ದಾರೆ. ಮನೆಗೆ ಬಂದವರನ್ನು ಬರಬೇಡ ಎನ್ನಲಿಕ್ಕಾಗದು. ಅವರ ಪಕ್ಷದ ವಿವರಗಳು ನನಗೆ ಗೊತ್ತಿಲ್ಲ. ನನ್ನ ಜತೆ ಯಾವ ಮಾಜಿ ಶಾಸಕರೂ ಸಂಪರ್ಕದಲ್ಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದಾವಣಗೆರೆಗೆ 2016-17ರಲ್ಲಿ ಸ್ಮಾರ್ಟ್ಸಿಟಿ ಯೋಜನೆ ಬರಲು ಕಾಂಗ್ರೆಸ್ ಕಾರಣವೇ ಹೊರತು ಬಿಜೆಪಿ ಅಲ್ಲ. ಆಗ 9 ಸ್ಥಾನದಲ್ಲಿದ್ದ ದಾವಣಗೆರೆ ಇಂದು ಏನಾಗಿದೆ. ಬಿಜೆಪಿಗರ ಕಾಲದಲ್ಲಿ ನಗರ ಹಾಳಾಗಿದೆ ಎಂದು ಟೀಕಿಸಿದರು.