ರಾಣೆಬೆನ್ನೂರ: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ಇಲ್ಲಿಯ ವರ್ತಕರ ಸಂಘದ ವತಿಯಿಂದ ಬುಧವಾರ ಶಿರಸ್ತೇದಾರ್ ಎಂ.ಎನ್. ಹಾದಿಮನಿ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ವಿ.ಪಿ. ಲಿಂಗನಗೌಡ್ರ ಮಾತನಾಡಿ, ಸದ್ಯ ಇರುವ ಎಪಿಎಂಸಿ ಕಾಯ್ದೆ ರೈತರ ಶೋಷಣೆ ತಪ್ಪಿಸಲು, ಬೆಳೆಗೆ ಯೋಗ್ಯ ಬೆಲೆ ಸಿಗಲು ಅನುಕೂಲಕರವಾಗಿದೆ. ರೈತರಿಗೆ ರಕ್ಷಣೆ ಸಹ ನೀಡುತ್ತಿದೆ. ಇದಕ್ಕೆ ತಿದ್ದುಪಡಿ ತರುವುದು ಸೂಕ್ತವಲ್ಲ. ಸರ್ಕಾರ ರೈತರ ಹಿತ ಕಾಯಬೇಕೇ ಹೊರತು ಕಾಯ್ದೆಗೆ ತಿದ್ದುಪಡಿ ತಂದು ರೈತರನ್ನು ಶೋಷಣೆಗೆ ಒಳಪಡಿಸಬಾರದು ಎಂದರು.
ಎಪಿಎಂಸಿ ವರ್ತಕರು ಸಂಸ್ಕರಿಸಿದ ಸರಕುಗಳಿಗೆ ಶೇ. 1.5ರಷ್ಟು ಮಾರುಕಟ್ಟೆ ಶುಲ್ಕ ಪಾವತಿಸಿ ಸರ್ಕಾರದ ನಿಯಮಾನುಸಾರವಾಗಿ ನಡೆದುಕೊಳ್ಳುತ್ತಿದ್ದಾರೆ. ಆದರೆ, ಎಪಿಎಂಸಿ ವರ್ತಕರ ಹಿತಕ್ಕೆ ಧಕ್ಕೆ ತರುವ ಹಲವು ಕಾಪೋರೇಟ್ ಹಾಗೂ ಸ್ಟ್ರಾರ್ಟ್ಅಪ್ ಕಂಪನಿಗಳು ಸರ್ಕಾರಕ್ಕೆ ಯಾವುದೇ ನಿಗದಿತ ಶುಲ್ಕವನ್ನು ಪಾವತಿಸದೇ ಸಂಸ್ಕರಿಸಿದ ಕೃಷಿ ಉತ್ಪನ್ನಗಳ ಸರಕುಗಳನ್ನು ಖರೀದಿಸಿ ರಾಜ್ಯದ ಪ್ರಮುಖ ನಗರಗಳಿಗೆ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿವೆ. ಈ ಸಂಬಂಧ ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ ಎಂಬ ಮಾಹಿತಿ ಬಂದಿದೆ. ಇದರಿಂದ ಸ್ಥಳೀಯ ವ್ಯಾಪಾರಸ್ಥರಿಗೆ ಹಾಗೂ ರೈತರಿಗೆ ತೊಂದರೆ ಉಂಟಾಗಲಿದೆ. ಆದ್ದರಿಂದ ಸರ್ಕಾರ ಯಾವುದೇ ಕಾರಣಕ್ಕೂ ಮಾರುಕಟ್ಟೆಯಿಂದ ಹೊರಗಡೆ ರೈತರ ಉತ್ಪನ್ನ ಮಾರಾಟ ಮಾಡಲು ಅವಕಾಶ ನೀಡಬಾರದು. ಕಾಯ್ದೆಗೆ ಯಾವುದೇ ತಿದ್ದುಪಡಿ ತರಬಾರದು ಎಂದು ಒತ್ತಾಯಿಸಿದರು.
ಪ್ರಮುಖರಾದ ಜಿ.ಜಿ. ಹೊಟ್ಟಿಗೌಡ್ರ, ಸದಾನಂದ ಉಪ್ಪಿನ, ಪಾಂಡಪ್ಪ ಮಾಳೋದೆ, ಶಿವಯೋಗಿ ಅಸುಂಡಿ, ಅಶೋಕ ಹೊಟ್ಟಿಗೌಡ್ರ, ಸುನೀಲ ಸವಣೂರ, ಮಾಲತೇಶ ಚಳಗೇರಿ, ಜಿ.ಬಿ. ಜಂಬಗಿ, ಸುಧೀರ ಕುರವತ್ತಿ, ಸೋಮಶೇಖರ ಗೌಡಶಿವಣ್ಣನವರ, ರಾಜಶೇಖರ ಹಾದಿಮನಿ ಮತ್ತಿತರರು ಉಪಸ್ಥಿತರಿದ್ದರು.