ಹಾವೇರಿ: ತಾಲೂಕಿನ ನೆಗಳೂರ ಗ್ರಾಮದ ಕೋಡಿದುರಗಮ್ಮದೇವಿ ದೇವಸ್ಥಾನದ ಹಿಂಭಾಗದ ಕೆರೆ(ಬಾಂದಾರ)ಯಲ್ಲಿ ಎತ್ತುಗಳ ಮೈತೊಳೆಯಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ತಾಲೂಕಿನ ನೆಗಳೂರ ಗ್ರಾಮದ ಆಕಾಶ ಮಂಜುನಾಥ ಹೆಸರೂರ (14) ಮೃತಪಟ್ಟ ಬಾಲಕ ಎಂದು ತಿಳಿದುಬಂದಿದೆ. ಮಧ್ಯಾಹ್ನ 1ಗಂಟೆ ಹೊತ್ತಿಗೆ ಬಾಂದರದಲ್ಲಿ ಎತ್ತುಗಳ ಮೈತೊಳೆಯಲು ಹೋಗಿದ್ದ. ಈ ಸಮಯದಲ್ಲಿ ನೀರಿನಲ್ಲಿ ಮುಳುಗಿದ್ದಾನೆ. ಬಾಲಕನ ಮೃತದೇಹವೂ ಸಂಜೆಯವರೆಗೂ ಪತ್ತೆಯಾಗಿಲ್ಲ. ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಬಾಲಕನ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.