ಬಸವಕಲ್ಯಾಣ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿ ಬಿಲ್ ಪಾವತಿಗೆ ಗ್ರಾಪಂ ಜೆಇ ಲಂಚ ಕೇಳುತ್ತಿರುವುದರಿಂದ ಬೇಸತ್ತ ರೈತನೊಬ್ಬ ತನ್ನ ಎರಡು ಎತ್ತುಗಳನ್ನೇ ಲಂಚದ ರೂಪದಲ್ಲಿ ನೀಡಲು ಮುಂದಾದ ಪ್ರಸಂಗ ಸೋಮವಾರ ನಡೆದಿದೆ. ಈ ಅನಿರೀಕ್ಷಿತ ಬೆಳವಣಿಗೆ ತಾಪಂ ಕಚೇರಿ ಅಧಿಕಾರಿಗಳಲ್ಲಿ ಕೆಲಕಾಲ ಮುಜುಗರ ಮೂಡಿಸಿತು.
ಎರಡು ಎತ್ತುಗಳೊಂದಿಗೆ ತಾಪಂ ಕಚೇರಿಗೆ ಆಗಮಿಸಿದ ಬಗದೂರಿ ಗ್ರಾಮದ ರೈತ ಪ್ರಶಾಂತ ಬಿರಾದಾರ, ಖಾತ್ರಿ ಯೋಜನೆಯಡಿ ಕಳೆದ ವರ್ಷ ತಮ್ಮ ಜಮೀನಿನಲ್ಲಿರುವ ಹಳ್ಳಕ್ಕೆ ತಡೆಗೋಡೆ ನಿರ್ಮಿಸಲಾಗಿದೆ. ಇದಕ್ಕಾಗಿ ಒಂದು ಲಕ್ಷ ಅನುದಾನ ಮಂಜೂರಾಗಿತ್ತು. ರೈತನಿಗೆ ೫೫ ಸಾವಿರ ರೂ. ಪಾವತಿಸಿದ್ದು, ೪೫ ಸಾವಿರ ರೂ. ಸಾಮಗ್ರಿ (ಮಟೇರಿಯಲ್) ಹಣ ಪಾವತಿಯಾಗಿಲ್ಲ. ಇದನ್ನು ಕೊಡುವಂತೆ ಮನವಿ ಮಾಡಿದಾ ಕಿರಿಯ ಅಭಿಯಂತರ (ಜೆಇ) ಶೇ.೫ (೫೦೦೦ ರೂ.) ಲಂಚದ ಬೇಡಿಕೆ ಇಟ್ಟಿದ್ದರು. ತಮ್ಮ ಬಳಿ ಅಷ್ಟೊಂದು ಹಣ ಇಲ್ಲ ಎಂದು ರೈತ ಹೇಳಿದ್ದರಿಂದ ಬಿಲ್ ಪಾವತಿಗೆ ತಡೆ ಹಿಡಿಯಲಾಗಿದೆ.
ಇದರಿಂದ ರೋಸಿ ಹೋದ ಪ್ರಶಾಂತ, ಎರಡು ಎತ್ತುಗಳನ್ನೇ ಲಂಚದ ರೂಪದಲ್ಲಿ ಪಡೆದು ೪೫ ಸಾವಿರ ರೂ. ಬಿಲ್ ಪಾವತಿಸುವಂತೆ ಮನವಿ ಮಾಡಿದ್ದಾರೆ. ಸುದ್ದಿ ತಿಳಿಯುತ್ತಲೇ ತಾಪಂ ಎಡಿ ಸಂತೋಷ ಚವ್ಹಾಣ್ ಸ್ಥಳಕ್ಕೆ ದೌಡಾಯಿಸಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ರೈತ ಮನೆಯತ್ತ ಹೆಜ್ಜೆ ಹಾಕಿದ್ದಾನೆ ಎನ್ನಲಾಗಿದೆ.