ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ವಿರುದ್ಧ ಸಿಡಿದೆದ್ದು ಶಿವಮೊಗ್ಗ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಗುರುವಾರ ಮಲ್ಲೇಶ್ವರ ಗುಂಡಪ್ಪಶೆಡ್ನ ತಮ್ಮ ನಿವಾಸದಲ್ಲಿ ಲೋಕಸಭಾ ಚುನಾವಣಾ ಕಾರ್ಯಾಲಯ ತೆರೆದರು.
ಬೆಳಗ್ಗೆಯೇ ಹೋಮ, ವಿಶೇಷ ಪೂಜೆ ನಡೆಸಿ ಕಾರ್ಯಾಲಯ ಉದ್ಘಾಟಿಸಿದ ಈಶ್ವರಪ್ಪ, ಲೋಕಸಭೆಗೆ ಶಿವಮೊಗ್ಗದಿಂದ ಸ್ಪರ್ಧೆ ಖಚಿತವೆಂದು ಪುನಃರುಚ್ಛರಿಸಿದರು. ಪ್ರಧಾನಿ ನರೇಂದ್ರ ಮೋದಿಯಲ್ಲ, ಬ್ರಹ್ಮನೇ ಬಂದು ಹೇಳಿದರೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ. ಈ ಬಗ್ಗೆ ಅಭಿಮಾನಿಗಳು, ಹಿತೈಷಿಗಳಿಗೆ ಯಾವುದೇ ಆತಂಕ ಬೇಡ ಎಂದರು.
ರಾಜ್ಯದಲ್ಲಿ 27 ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ. ಶಿವಮೊಗ್ಗದಲ್ಲಿ ನಾನು ಪಕ್ಷೇತರನಾಗಿ ಗೆದ್ದು ಆನಂತರ ಬಿಜೆಪಿ ಸೇರುತ್ತೇವೆ. ಈ ಮೂಲಕ ಅಪ್ಪ-ಮಕ್ಕಳಿಗೆ ತಕ್ಕಪಾಠ ಕಲಿಸುತ್ತೇನೆ. ಹಣ, ಮದ್ಯ ಹಂಚಿ ಚುನಾವಣೆ ಮಾಡುವವರಿಗೆ ಸೋಲಿನ ರುಚಿ ಮುಟ್ಟಿಸಬೇಕಿದೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಪಾಲಿಕೆ ಮಾಜಿ ಸದಸ್ಯರಾದ ಇ.ವಿಶ್ವಾಸ್, ಆರತಿ ಪ್ರಕಾಶ್, ಲಕ್ಷ್ಮೀ ಶಂಕರನಾಯ್ಕ, ಪ್ರಮುಖರಾದ ಮಹಾಲಿಂಗ ಶಾಸ್ತ್ರಿ ಮತ್ತಿತರರಿದ್ದರು.