ಪುಣೆ: ಗೆಲುವಿನ ಖಾತೆ ತೆರೆಯಲು ಪರದಾಡುತ್ತಿರುವ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಎರಡು ಅಮೋಘ ಗೆಲುವಿನೊಂದಿಗೆ ಬೀಗಿರುವ ಕೋಲ್ಕತ ನೈಟ್ರೈಡರ್ಸ್ ತಂಡಗಳು ಐಪಿಎಲ್-15ರಲ್ಲಿ ಬುಧವಾರ ಮುಖಾಮುಖಿ ಆಗಲಿವೆ. ಪುಣೆಯ ಎಂಸಿಎ ಕ್ರೀಡಾಂಗಣ ಈ ಕುತೂಹಲಕಾರಿ ಪಂದ್ಯಕ್ಕೆ ವೇದಿಕೆಯಾಗಲಿದೆ. ಹಾಲಿ ಫಾರ್ಮ್ ಕೆಕೆಆರ್ ಪರ ಇದ್ದರೆ, ಇತಿಹಾಸದ ಬಲ ಮುಂಬೈ ಪರವಾಗಿದೆ.
ಮೊದಲ ಪಂದ್ಯದಲ್ಲಿ ಡೆಲ್ಲಿಗೆ ಮಣಿದಿದ್ದ ಮುಂಬೈ 2ನೇ ಪಂದ್ಯದಲ್ಲಿ ರಾಜಸ್ಥಾನಕ್ಕೆ ಶರಣಾಗಿತ್ತು. ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ವಿಭಾಗದ ಅಸ್ಥಿರ ನಿರ್ವಹಣೆಯ ಜತೆಗೆ ಬುಮ್ರಾ-ಮಿಲ್ಸ್ ಹೊರತಾಗಿ ಇತರ ಬೌಲರ್ಗಳ ವೈಫಲ್ಯದಿಂದ ರೋಹಿತ್ ಶರ್ಮ ಪಡೆ ಹಿನ್ನಡೆ ಎದುರಿಸಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಪುಟಿದೇಳಲು ಮುಂಬೈ ತಂಡ ಸಜ್ಜಾಗಿದೆ.
ಮತ್ತೊಂದೆಡೆ ಕೆಕೆಆರ್ ತಂಡ ಮೊದಲ 3 ಪಂದ್ಯಗಳ ಪೈಕಿ ಆರ್ಸಿಬಿ ವಿರುದ್ಧ ಎಡವಿದ್ದರೆ, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಬೀಗಿತ್ತು. ಅದೇ ಲಯ ಕಾಯ್ದುಕೊಳ್ಳುವ ಹಂಬಲ ಶ್ರೇಯಸ್ ಅಯ್ಯರ್ ಬಳಗದ್ದಾಗಿದೆ.
ಮುಂಬೈಗೆ ದೇಶೀಯ ಬೌಲರ್ಗಳ ಚಿಂತೆ
ಸ್ಟಾರ್ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್ ಮಿಂಚುತ್ತಿದ್ದರೂ, ಅವರಿಗೆ ದೇಶೀಯ ಬೌಲರ್ಗಳಾದ ಬಸಿಲ್ ಥಂಪಿ ಮತ್ತು ಸ್ಪಿನ್ನರ್ ಎಂ. ಅಶ್ವಿನ್ ಅವರಿಂದ ಸಮರ್ಥ ಬೆಂಬಲ ಸಿಗುತ್ತಿಲ್ಲ. ಅರೆಕಾಲಿಕ ಬೌಲರ್ ಆಗಿ ಕೈರಾನ್ ಪೊಲ್ಲಾರ್ಡ್ ಕೂಡ ದುಬಾರಿ ಆಗಿದ್ದಾರೆ. ಮತ್ತೋರ್ವ ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್ ಕೂಡ ವಿಕೆಟ್ ಕಬಳಿಸಲು ಶಕ್ತರಾಗುತ್ತಿಲ್ಲ. ಹೀಗಾಗಿ ಕೆಕೆಆರ್ ಬ್ಯಾಟರ್ಗಳ ವಿರುದ್ಧ ಮೇಲುಗೈ ಸಾಧಿಸಬೇಕಾದರೆ ರೋಹಿತ್ ಶರ್ಮ ಬಳಗ ಬೌಲಿಂಗ್ ವಿಭಾಗವನ್ನು ಬಲ ಪಡಿಸುವುದು ಅಗತ್ಯವಾಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ರೋಹಿತ್ ಶರ್ಮ ಲಯ ಕಂಡುಕೊಳ್ಳಬೇಕಿದೆ. ಪ್ರತಿ ಬಾರಿ ಇಶಾನ್ ಕಿಶನ್ ಅವರೊಬ್ಬರನ್ನೇ ನೆಚ್ಚಿಕೊಳ್ಳುವುದು ಮುಂಬೈ ಸಮಸ್ಯೆಯನ್ನು ನಿವಾರಿಸದು. ಸೂರ್ಯಕುಮಾರ್ ಯಾದವ್ ಕಣಕ್ಕಿಳಿದರೆ ಮುಂಬೈ ಬ್ಯಾಟಿಂಗ್ ವಿಭಾಗ ಸ್ವಲ್ಪಮಟ್ಟಿಗೆ ಸಮತೋಲನ ಕಂಡುಕೊಳ್ಳಬಹುದು.
ಭರ್ಜರಿ ಲಯದಲ್ಲಿ ಕೆಕೆಆರ್
ಆಲ್ರೌಂಡರ್ ಆಂಡ್ರೆ ರಸೆಲ್ ಬ್ಯಾಟಿಂಗ್ನಲ್ಲಿ ಮತ್ತೆ ಹಿಂದಿನ ಸ್ಫೋಟಕ ಶಕ್ತಿಯನ್ನು ಮರಳಿ ಪಡೆದಿರುವುದು ಕೆಕೆಆರ್ ತಂಡದ ಬಲ ಹೆಚ್ಚಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಪವರ್ುಲ್ ಸಿಕ್ಸರ್ಗಳನ್ನು ಸಿಡಿಸುವ ಮೂಲಕ ರಸೆಲ್ ವಿಜೃಂಭಿಸಿದ್ದರು. ಅವರು ಅದೇ ಲಯ ಮುಂದುವರಿಸಿದರೆ ಎದುರಾಳಿ ಬೌಲರ್ಗಳಿಗೆ ಸಂಕಷ್ಟ ಖಚಿತ. ವೇಗಿ ಉಮೇಶ್ ಯಾದವ್ ಕೂಡ ಮಾರಕ ದಾಳಿ ಸಂಘಟಿಸುತ್ತಿರುವುದು ಕೆಕೆಆರ್ಗೆ ಶಕ್ತಿ ತುಂಬಿದೆ. ಅವರಿಗೆ ಟಿಮ್ ಸೌಥಿ ಮತ್ತು ಶಿವಂ ಮಾವಿ ಉತ್ತಮ ಬೆಂಬಲ ನೀಡುತ್ತಿದ್ದಾರೆ. ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ವರುಣ್ ಚಕ್ರವರ್ತಿ ಮತ್ತು ಸುನೀಲ್ ನಾರಾಯಣ್ ಕೂಡ ಎದುರಾಳಿ ಬ್ಯಾಟರ್ಗಳ ಸಂಕಷ್ಟ ಹೆಚ್ಚಿಸಿದ್ದಾರೆ. ಇನ್ನುಳಿದಂತೆ ಅಜಿಂಕ್ಯ ರಹಾನೆ-ವೆಂಕಟೇಶ್ ಅಯ್ಯರ್ ಜೋಡಿ ಉತ್ತಮ ಆರಂಭ ಒದಗಿಸಬೇಕಾದ ಅಗತ್ಯವಿದೆ.
ಟೀಮ್ ನ್ಯೂಸ್:
ಮುಂಬೈ ಇಂಡಿಯನ್ಸ್: ಬೆರಳಿನ ಗಾಯಕ್ಕೆ ಎನ್ಸಿಎಯಲ್ಲಿ ಪುನಶ್ಚೇತನ ಮುಗಿಸಿರುವ ಸೂರ್ಯಕುಮಾರ್ ಯಾದವ್ ಈಗಾಗಲೆ ತಂಡವನ್ನು ಕೂಡಿಕೊಂಡಿದ್ದಾರೆ. ಆದರೆ ಅವರು ಕೆಕೆಆರ್ ವಿರುದ್ಧ ಆಡುವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸೂರ್ಯಕುಮಾರ್ ಕಣಕ್ಕಿಳಿದರೆ ಅನ್ಮೋಲ್ಪ್ರೀತ್ ಸಿಂಗ್ ಹೊರಗುಳಿಯಲಿದ್ದಾರೆ. ಟಿಮ್ ಡೇವಿಡ್ ಮೊದಲೆರಡು ಪಂದ್ಯಗಳಲ್ಲಿ ಸ್ಫೋಟಿಸದೆ ಇರುವುದರಿಂದ ದಕ್ಷಿಣ ಆಫ್ರಿಕಾದ ‘ಬೇಬಿ ಎಬಿ’ ಖ್ಯಾತಿಯ ಕಿರಿಯರ ವಿಶ್ವಕಪ್ ಹೀರೋ ಡಿವಾಲ್ಡ್ ಬ್ರೆವಿಸ್ಗೆ ಅವಕಾಶ ನಿರೀಕ್ಷಿಸಲಾಗಿದೆ.
ಕೋಲ್ಕತ ನೈಟ್ರೈಡರ್ಸ್: ಆಸೀಸ್ ಟೆಸ್ಟ್ ನಾಯಕ ಹಾಗೂ ವೇಗಿ ಪ್ಯಾಟ್ ಕಮ್ಮಿನ್ಸ್ ಹಾಲಿ ಆವೃತ್ತಿಯ ಮೊದಲ ಪಂದ್ಯ ಆಡಲು ಸಜ್ಜಾಗಿದ್ದು, ಸ್ಯಾಮ್ ಬಿಲ್ಲಿಂಗ್ಸ್ ಬದಲು ಕಣಕ್ಕಿಳಿಯಲಿದ್ದಾರೆ. ಇದರಿಂದ ಶೆಲ್ಡನ್ ಜಾಕ್ಸನ್ ವಿಕೆಟ್ ಕೀಪರ್ ಆಗಿ ತಂಡಕ್ಕೆ ಮರಳಲಿದ್ದಾರೆ.
*ಮುಖಾಮುಖಿ: 29
ಮುಂಬೈ: 22
ಕೆಕೆಆರ್: 7
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ನೀಲಿಚಿತ್ರ ನಟಿಯಿಂದ ಶಮಿಗೆ ಮೆಚ್ಚುಗೆ; ಕ್ರಿಕೆಟ್ ಪ್ರೇಮಿಗಳಿಗೆ ಶಾಕ್!