ಶಿವಮೊಗ್ಗ: ಗಾಂಧಿಪಾರ್ಕ್ನ ತೋಟಗಾರಿಕೆ ಇಲಾಖೆ ಆವರಣದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿರುವ 60ನೇ ಫಲಪುಷ್ಪ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಜ.24ರ ಸಂಜೆ 5ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ.
ಈ ಬಾರಿ ಅಪರೂಪದ ಹಣ್ಣುಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಫಲಪುಷ್ಪ ಪ್ರದರ್ಶನ, ಹಣ್ಣುಗಳ ಮೇಳ, ಆಹಾರ ಮೇಳ, ಪ್ರಾತ್ಯಕ್ಷಿಕೆ, ಮಳಿಗೆಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಟಿಕೆಗಳ ಅಮ್ಯೂಸ್ವೆುಂಟ್ ಪಾರ್ಕ್ ಎಲ್ಲವೂ ನಾಗರಿಕರಿಗೆ ಹೊಸ ಲೋಕವನ್ನೇ ತೆರೆದಿಡಲಿವೆ. ವಿವಿಧ ಕಲಾಕೃತಿಗಳ ಪುಷ್ಪಾಲಂಕಾರ, ತರಕಾರಿ ಹಾಗೂ ಹಣ್ಣುಗಳ ಕಲಾತ್ಮಕ ಜೋಡಣೆ, ಹೂಗಳಿಂದ ಅಲಂಕೃತಗೊಂಡ ವಿನ್ಯಾಸಗಳು, ತೋಟಗಾರಿಕಾ ಬೆಳೆಗಳ ಪ್ರದರ್ಶನ, ಸಾವಯವ ವಸ್ತುಗಳ ಪ್ರದರ್ಶನ-ಮಾರಾಟ ಹೀಗೆ ಒಂದೇ ವೇದಿಕೆಯಲ್ಲಿ ನಾವಿನ್ಯತೆ ಅನಾವರಣಗೊಳ್ಳಲಿದೆ.
ಹೂವಿನಿಂದ ಅಲಂಕೃತಗೊಂಡ ಬಸವಣ್ಣ ಹಾಗೂ ಉಳುವ ರೈತನ ಪ್ರತಿಕೃತಿ, ಸಿರಿಧಾನ್ಯದಲ್ಲಿ ತೋಟಗಾರಿಕೆ ಪಿತಾಮಹ ಡಾ. ಮರಿಗೌಡರ ಪ್ರತಿಕೃತಿ ಈ ಬಾರಿಯ ಆಕರ್ಷಣೆಯಾಗಿದೆ. ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿರುತ್ತದೆ. ಮಕ್ಕಳಿಗೆ 5 ರೂ. ಹಾಗೂ ವಯಸ್ಕರರಿಗೆ 10 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶಾಲಾ ಸಮವಸ್ತ್ರ ಧರಿಸಿ ಶಿಕ್ಷಕರೊಂದಿಗೆ ತೆರಳುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುತ್ತದೆ.