ಸೇಡಂ (ಕಲಬುರಗಿ): ಉತ್ತರ ಕರ್ನಾಟಕದ ಭಾಗದ ಬಹುತೇಕ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಶ್ರೀಮಂತಿಕೆಯಿಂದ ಕೂಡಿದೆ. ಆದರೆ ಅದನ್ನು ಆಸ್ತಿಯಂತೆ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕು ಎಂದು ಮಕ್ಕಳ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷೆ ಆರತಿ ಕಡಗಂಚಿ ಹೇಳಿದರು.
ಬ್ರಹ್ಮಕುಮಾರಿ ಆಶ್ರಮದಲ್ಲಿ ಕವಿರಾಜ ಪ್ರಕಾಶನ, ಶಕ್ತಿ ಗೆಳೆಯರ ಬಳಗ ಹಾಗೂ ಇಷ್ಟಸಿದ್ಧಿ ವಿನಾಯಕ ಭಕ್ತ ಮಂಡಳಿಯಿಂದ ಭಾನುವಾರ ಆಯೋಜಿಸಿದ್ದ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ ಅವರ ಕಾಗಿಣಾ ತೀರದ ಧ್ವನಿಗಳ ತರಂಗಗಳು ಅವಲೋಕನ ಕೃತಿ ಬಿಡುಗಡೆಗೊಳಿಸಿದ ಮಾತನಾಡಿ, ನಮ್ಮ ಭಾಗದ ಸೊಗಡು ರಾಜ್ಯದ ನಾನಾ ಭಾಗಗಳಲ್ಲಿ ಪಸರಿಸುವ ಕೆಲಸ ಮಾಡಬೇಕಾಗಿದೆ. ಸದಾ ಚಟುವಟಿಕೆಯಿಂದ ಕೂಡಿರುವ ಸೇಡಂ ನೆಲದ ಸಾಹಿತಿಗಳು ಒಟ್ಟಾಗಿ ಇಂತಹ ಕೆಲಸಕ್ಕೆ ಮುಂದಾಗಬೇಕು ಎಂದರು.
ಹಿರಿಯ ಸಾಹಿತಿ ಗುರುಶಾಂತಯ್ಯ ಭಂಟನೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ ಅನೇಕ ಸಾಹಿತಿಗಳು ರಾಷ್ಟ್ರಕೂಟರ ನೆಲದಲ್ಲಿದ್ದಾರೆ. ನಮ್ಮ ಭಾಗ ಹಿಂದುಳಿದಿದೆ ಎಂದು ಹೇಳಿ ಹೇಳಿ ನಮ್ಮನ್ನು ಹಿಂದಿಡುವ ಕೆಲಸ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಯೋಗಿನಿ ಬ್ರಹ್ಮಕುಮಾರಿ ಕಲಾವತಿ, ಉದ್ಯಮಿ ಓಂಪ್ರಕಾಶ ಲಡ್ಡಾ, ಶಿಕ್ಷಕ ರಾಜು ಟಿ., ಲೇಖಕ ಡಾ.ಎಂ.ಜಿ.ದೇಶಪಾಂಡೆ, ಇಷ್ಟಸಿದ್ಧಿ ವಿನಾಯಕ ಭಕ್ತ ಮಂಡಳಿಯ ಶಿವಶರಣಪ್ಪ ಚಂದನಕೇರಾ ಇದ್ದರು.