ನಂದಗುಡಿ: ದೇಶಾದ್ಯಂತ ಕರೊನಾ ತುರ್ತುಪರಿಸ್ಥಿತಿ ಉಂಟಾಗಿದೆ. ಇದರ ನಿರ್ಮೂಲನೆಯಲ್ಲಿ ಆಶಾ ಕಾರ್ಯಕರ್ತರ ಕೊಡುಗೆ ಅಪಾರವಾಗಿದೆ. ಕೊಡುವ ಅಲ್ಪ ಸಹಾಯಧನದಲ್ಲೇ ಲಾಕ್ಡೌನ್ ಅವಧಿಯಲ್ಲಿ ಮನೆ ಮನೆಗೆ ತೆರಳಿ ಜನಸಾಮಾನ್ಯರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಅವರ ಸೇವೆ ಸ್ಮರಣೀಯ ಎಂದು ಪೌರಾಡಳಿತ ಮತ್ತು ಸಕ್ಕರೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೋಬಳಿಯ ನಂದಗುಡಿ, ಬೈಲನರಸಾಪುರ, ಶಿವಪುರ, ಮುಗಬಾಳ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 148ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಹಾಗೂ ಶುಶ್ರೂಷಕಿಯರಿಗೆ ಮಂಗಳವಾರ ದಿನಸಿ ಕಿಟ್ ವಿತರಿಸಿ ಮಾತನಾಡಿದರು.
ಪ್ರಾಥಮಿಕ ಹಂತದಲ್ಲೇ ಕರೊನಾ ಸೋಂಕು ಪತ್ತೆ ಮಾಡುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ತುಂಬಾ ಮುಖ್ಯವಾದದ್ದು. ಅವರ ಕುಟುಂಬದವರ ರಕ್ಷಣೆ ನಮ್ಮ ಕರ್ತವ್ಯ. ನಿಮ್ಮೆಲ್ಲರಿಗೂ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.
ಆಶಾ ಕಾರ್ಯಕರ್ತೆಯರಿಗೆ ಮೂರು ತಿಂಗಳಿಂದ ವೇತನ ಬಂದಿಲ್ಲ ಎಂಬುದು ಗಮನಕ್ಕೆ ಬಂದಿದೆ. ಮುಖ್ಯಮಂತ್ರಿ ಅವರ ಜತೆ ಮಾತನಾಡಿ, ತಕ್ಷಣವೇ ವೇತನ ಬಿಡುಗಡೆಗೆ ಪ್ರಯತ್ನಿಸುವೆ ಎಂದರು.
ತಾಲೂಕಿನಲ್ಲಿ ಕರೊನಾ ಲಸಿಕೆ ಅವಶ್ಯಕತೆ ಇದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವೈದ್ಯಧಿಕಾರಿ ಅವರ ಜತೆ ಮಾತನಾಡಿ ಎರಡ್ಮೂರು ದಿನದಲ್ಲಿ ಅದನ್ನು ವ್ಯವಸ್ಥೆ ಮಾಡಲಾಗುವುದು. ತಾಲೂಕಿನಲ್ಲಿ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧದ ಕಿಟ್, ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸಲಾಗಿದೆ. ಎಲ್ಲ ವೈದ್ಯಾಧಿಕಾರಿಗಳು ಹೆಚ್ಚಿನ ಔಷಧ ಕಿಟ್ಗಳು ಬೇಕಾದರೆ ಗಮನಕ್ಕೆ ತರಬೇಕು. ತುರ್ತಾಗಿ ಅವನ್ನು ಸರಬಾಜು ಮಾಡಲಾಗುವುದು ಎಂದು ಹೇಳಿದರು.
ಹೊಸಕೋಟೆ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆರ್. ರಾಮು, ಪಂಚಾಯಿತಿ ಸದಸ್ಯರಾದ ನಂದಿನಿ, ಮುನಿರತ್ನಪ್ಪ, ಮಾಜಿ ಸದಸ್ಯ ಕೆ. ಸುರೇಶ್, ಪಿಡಿಒಗಳಾದ ಚೇತನ್ ಕುಮಾರ್, ಶ್ರೀನಿವಾಸ್, ಮೆಹಬೂಬ್ ಆಬ್, ಆರೋಗ್ಯ ಅಧಿಕಾರಿಗಳಾದ ಡಾ. ಭಾಸ್ಕರ್ ರೆಡ್ಡಿ, ಡಾ. ಕಿರಣ್ ಕುಮಾರ್ ಮತ್ತಿತರರಿದ್ದರು.