ಯಾದಗಿರಿ: ಮನುಷ್ಯ ಯಾವುದೇ ಸಾಧನೆ ಮಾಡಬೇಕಾದರೆ ಆರೋಗ್ಯ ಬಹಳ ಮುಖ್ಯ. ಹೀಗಾಗಿ ನಮ್ಮ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಲು ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರ ಹೊನೋಲೆ ಸಲಹೆ ಮಾಡಿದರು.
ವಡಿಗೇರಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಆಯೋಜಿಸಿದ್ದ ಕಾನೂನು-ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಚ್ಐವಿ ಅಥವಾ ಏಡ್ಸ್ ನಿಯಂತ್ರಣ ಮತ್ತು ತಡೆ ಕಾಯ್ದೆ 2017ರ ಪ್ರಕಾರ ಸೋಂಕಿತ ವ್ಯಕ್ತಿಯ ಮಾಹಿತಿಯನ್ನು ಗೌಪ್ಯವಿಡಲಾಗುತ್ತದೆ. ತೀವ್ರತರಹ ಅನಾರೋಗ್ಯದಿಂದ ಬಳಲುತಿರುವ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ದೊರೆಯುತ್ತದೆ ಎಂದು ತಿಳಿಸಿದರು.
ಐಸಿಟಿಸಿ ಸಲಹೆಗಾರ ವೆಂಕಟೇಶ ಮಾತನಾಡಿ ಏಡ್ಸ್ ರೋಗಿಗಳಿಗೆ ಇರುವ ವೈದ್ಯಕೀಯ ಸೌಲಭ್ಯಗಳ ಬಗ್ಗೆ ತಿಳಿಸಿದರು. ಎಚ್ಐವಿ ಅಥವಾ ಏಡ್ಸ್ ವಿರುದ್ಧದ ಹೋರಾಟದಲ್ಲಿ ವಿಶ್ವವು ಸಾಧಿಸಿದ ಪ್ರಗತಿಯನ್ನು ಬಿಂಬಿಸಲು ಈ ದಿನ ಆಚರಿಸಲಾಗುತ್ತಿದೆ. ಸೊಂಕಿನ ಪ್ರಮಾಣ ಕಡಿಮೆ ಮಾಡಲು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಸಮುದಾಯಗಳು ಮುನ್ನಡೆಸಲಿ ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ ಎಂದರು.