ಚಿತ್ರದುರ್ಗ: ನಗರದಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ರಸ್ತೆ ವಿಭಜಕಗಳ ಪೈಕಿ ಕೆಲವನ್ನು ತೆರವುಗೊಳಿಸುವ ಕಾರ್ಯಾಚರಣೆ ಶುಕ್ರವಾರ ರಾತ್ರಿ 8.20ರಿಂದ ಆರಂಭವಾಯಿತು.
ಆರ್ಟಿಒ ರಸ್ತೆ ಮುಂಭಾಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತೆರವು ಕಾರ್ಯಕ್ಕೆ ಚಾಲನೆ ನೀಡಿದರು. ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಇದ್ದರು.
ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದ ಆರ್ಟಿಒ ಕಚೇರಿ, ಜೆಸಿಆರ್ ಬಡಾವಣೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪದ ದರ್ಗಾ ಸೇರಿ ಕೆಲ ರಸ್ತೆ ವಿಭಜಕಗಳನ್ನು ತೆರವುಗೊಳಿಸುವ ಸಾಧ್ಯತೆ ಇದೆ.
ಜನ, ವಾಹನಗಳು ಸಂಚರಿಸದ ಕಾರಾಗೃಹ ರಸ್ತೆಯಲ್ಲೂ ವಿಭಜಕ ನಿರ್ಮಿಸಲಾಗಿದೆ. ಇಲ್ಲಿ ಅಗತ್ಯವಿರಲಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿತ್ತು. ಅವೈಜ್ಞಾನಿಕ ಡಿವೈಡರ್ ತೆರವುಗೊಳಿಸಲು ಕೆಲ ಸಂಘಟನೆಗಳು ಈ ಹಿಂದೆ ಬೀದಿಗಿಳಿದು ಪ್ರತಿಭಟನೆ ಕೂಡ ನಡೆಸಿದ್ದವು.
ಆರ್ಟಿಒ ರಸ್ತೆ ಮುಂಭಾಗದಲ್ಲಿ 50 ಅಡಿಯಷ್ಟು ದೂರ ತೆರವುಗೊಳಿಸಿದ ನಂತರ ಇಟ್ಯಾಚಿ ಯಂತ್ರ ಕಾರ್ಯಾಚರಣೆ ನಿಲ್ಲಿಸಿತು. ಶಾಸಕರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.