More

    ಅಳಿದು ಹೋದರೂ ಮಾಡಿದ ಕೆಲಸ ಉಳಿಯಬೇಕು

    ಬೆಳಗಾವಿ: ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ ಗುರುವಾರ ಪಿ.ಬಿ. ಸ್ವಾಮಿ ಅವರು ರಚಿಸಿದ ‘ಮನದಾಳದ ಮಹನೀಯರು ಮತ್ತು ಘಟನೆಗಳು’ ಕೃತಿ ಬಿಡುಗಡೆ ಸಮಾರಂಭ ಜರುಗಿತು.

    ಅಧ್ಯಕ್ಷತೆ ವಹಿಸಿದ್ದ ಕವಿ, ನಿವೃತ್ತ ನ್ಯಾಯಾಧೀಶ ಡಾ.ಜಿನದತ್ತ ದೇಸಾಯಿ ಮಾತನಾಡಿ, ನಾವು ಅಳಿದು ಹೋದರೂ ಮಾಡಿದ ಕಾರ್ಯಗಳು ಉಳಿಯುತ್ತವೆ. ತಮ್ಮ ವಿಶಿಷ್ಟ ಅನುಭವಗಳನ್ನು ಲೇಖಕ ಸ್ವಾಮಿ ಅವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಮಂದಿನ ಪೀಳಿಗೆಗೆ ಇಲ್ಲಿರುವ ಅನುಭವಗಳು ದೀಪಸ್ತಂಭವಾಗಿ ನಿಂತಿವೆ. ವೈವಿಧ್ಯಮಯ ಜೀವನ ಹೊಂದಿರುವ ಈ ಲೇಖಕರಿಂದ ಆತ್ಮಚರಿತ್ರೆ ಹೊರಬಂದಾಗಲೇ ನನಗೆ ತೃಪ್ತಿ ಎಂದರು.

    ಕೃತಿ ಪರಿಚಯ ಮಾಡಿದ ಹಿರಿಯ ಪತ್ರಕರ್ತ ಎಲ್.ಎಸ್.ಶಾಸ್ತ್ರಿ ಮಾತನಾಡಿ, ಸ್ವಾಮಿ ಅವರು ಕನ್ನಡಕ್ಕೆ ಸಲ್ಲಿಸಿದ ಸೇವೆ ಅಪಾರ. ಗಡಿನಾಡಿಗೆ ಸಂಬಂಧಪಟ್ಟ, ಕನ್ನಡ, ಮರಾಠಿ ಬಾಂಧವ್ಯಕ್ಕೆ ಸಂಬಂಧಪಟ್ಟ ಲೇಖನಗಳನ್ನು ಇಲ್ಲಿ ಬರೆದಿದ್ದಾರೆ ಎಂದರು.

    ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ ಮಾತನಾಡಿ, ಇತ್ತೀಚೆಗೆ ಹತ್ತು ಹದಿನೈದು ಪುಸ್ತಕಗಳನ್ನು ಒಮ್ಮೆಲೆ ಬಿಡುಗಡೆ ಮಾಡುವ ಪದ್ಧ್ದತಿ ಆರಂಭವಾಗಿದೆ. ಆದರೆ, ಎಷ್ಟು ಪುಸ್ತಕ ಬಿಡುಗಡೆ ಮಾಡಿದೆವೆನ್ನುವುದಕ್ಕಿಂತ ಗಟ್ಟಿಕಾಳಿನ ಒಂದು ಪುಸ್ತಕವನ್ನು ಬರೆದರೂ ಸಾಕು. ಸ್ವಾಮಿಯವರು ಮೌಲ್ಯಯುತವಾದ ಕೃತಿಯನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅವರನ್ನು ಅಭಿನಂದಿಸೋಣ ಎಂದರು. ಲೇಖಕ ಪಿ.ಬಿ.ಸ್ವಾಮಿ ಮಾತನಾಡಿ, ಈ ಕೃತಿಯಲ್ಲಿ ಡಾ. ವಿ.ಕೆ. ಗೋಕಾಕ, ದ.ರಾ. ಬೇಂದ್ರೆ, ಡಾ. ಜಿನದತ್ತ ದೇಸಾಯಿ, ಡಾ. ಪಂಚಾಕ್ಷರಿ ಹಿರೇಮಠ, ಎಲ್.ಎಸ್.ಶಾಸ್ತ್ರಿ ಅವರ ಕುರಿತಾದ ಲೇಖನಗಳು, ಕನ್ನಡ ಮತ್ತು ಮರಾಠಿ ಭಾಷಾ ಬಾಂಧವ್ಯ, ಪಂಚಾಯತ್ ರಾಜ್ ವ್ಯವಸ್ಥೆ, ನನ್ನ ಚಿಕ್ಕಂದಿನ ಶಾಲಾ ದಿನಗಳ ಕುರಿತು. ಹೀಗೆ ಹಲವಾರು ಲೇಖನಗಳನ್ನು ಬರೆದಿರುವ ಹಿನ್ನೆಲೆ ಕುರಿತು ಹೇಳಿದರು. ಕೃತಿ ಹೊರಬರಲು ಸಹಕರಿಸಿದವರನ್ನು ನೆನಪಿಸಿಕೊಂಡರು. ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿರುವ ಡಾ.ಜಿನದತ್ತ ದೇಸಾಯಿ ಅವರನ್ನು ಹಾಗೂ ಲೇಖಕ ಪಿ.ಬಿ.ಸ್ವಾಮಿ ಅವರನ್ನು ಶಾಲು ಹೊದಿಸಿ ಫಲಪುಷ್ಟ ನೀಡಿ, ಸನ್ಮಾನಿಸಲಾಯಿತು. ಸುಪ್ರಿಯಾ ದೇಶಪಾಂಡೆ ಪ್ರಾರ್ಥಿಸಿದರು. ದೀಪಿಕಾ ಚಾಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ ಮಳಗಲಿ ನಿರೂಪಿಸಿದರು. ಎಂ.ಬಿ. ಹೊಸಳ್ಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts