ಬೆಳಗಾವಿ: ಕಿತ್ತೂರು ಸಂಸ್ಥಾನ ಹಾಗೂ ರಾಣಿ ಚನ್ನಮ್ಮಳ ಗತ ವೈಭವ ಸಾರುವ ಭವ್ಯ ಅರಮನೆ ಪ್ರತಿರೂಪ (ರೆಪ್ಲಿಕಾ) ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ತಯಾರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳಗಾವಿ ಸುವರ್ಣಸೌಧದ ಸಮಿತಿ ಸಭಾಂಗಣದಲ್ಲಿ, ಕಿತ್ತೂರು ಚನ್ನಮ್ಮ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗುತ್ತಿರುವ ರಾಣಿ ಚನ್ನಮ್ಮ ಅರಮನೆ ಕಟ್ಟಡದ ನೀಲಿನಕ್ಷೆಯನ್ನು ಗುರುವಾರ ವೀಕ್ಷಿಸಿ ಅವರು ಮಾತನಾಡಿದರು.
ಕಿತ್ತೂರು ಸಂಸ್ಥಾನದ ಐತಿಹ್ಯ ದೊಡ್ಡದು. ಬ್ರಿಟಿಷರ ವಿರುದ್ಧ ರಾಣಿ ಚನ್ನಮ್ಮಳ ಹೋರಾಟವೂ ದೊಡ್ಡದಿದೆ. ಈ ಕುರಿತು ಸ್ಥಳೀಯರಿಗೆ ಮಾಹಿತಿಯಿದೆ. ಆದರೆ, ಪ್ರವಾಸಿಗರು ಭೇಟಿ ನೀಡಿದಾಗ ಹಳೆಯ ಅರಮನೆ ವೀಕ್ಷಿಸಿದರೆ ಕಿತ್ತೂರು ಸಂಸ್ಥಾನದ ಭವ್ಯತೆ ಅರಿವಿಗೆ ಬರುವುದಿಲ್ಲ. ಹಳೆಯ ಅರಮನೆಯನ್ನು ಪುನರ್ ಸ್ಥಾಪನೆ ಮಾಡಬೇಕು ಎಂದರು.
ರಾಣಿ ಚನ್ನಮ್ಮಳ ಸಾಹಸ, ಆಡಳಿತ, ಶೌರ್ಯ, ಇತಿಹಾಸ ಮುಂದಿನ ಪೀಳಿಗೆಗೆ ತಿಳಿಸಲು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ದೃಷ್ಟಿಯಿಂದ ಸಮಕಾಲೀನ ಅರಮನೆಯ ಪ್ರತಿರೂಪ ನಿರ್ಮಿಸಬೇಕು. ಪುರಾತತ್ವ, ಪ್ರವಾಸೋದ್ಯಮ ಇಲಾಖೆಯೊಂದಿಗೆ ಸಮಾಲೋಚಿಸಿ ಲೋಕೋಪಯೋಗಿ ಅಧಿಕಾರಿಗಳಿಂದ ವಿಸ್ತೃತ ಯೋಜನೆ ವರದಿ ಸಿದ್ಧಪಡಿಸಬೇಕು. ಯೋಜನೆಗೆ ಅಗತ್ಯವಾದ ಭೂಮಿಯನ್ನೂ ಸಹ ಮೀಸಲಿಡಿ. ವಿಸ್ತೃತ ಯೋಜನೆಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳುವಂತೆ ಸಿಎಂ ಬೊಮ್ಮಾಯಿ ತಿಳಿಸಿದರು.
ಶಾಸಕರಾದ ಮಹಾಂತೇಶ ದೊಡಗೌಡರ, ಅಮೃತ ದೇಸಾಯಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ ಗಿರಿನಾಥ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ ಬಗಲಿ ಇತರರಿದ್ದರು.