ಮಂಗಳೂರು: ರಾಮ ಮಂದಿರ ನಿಧಿ ಸಮರ್ಪಣೆಯಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು. ಮನೆಯೊಂದರಿಂದ ಕನಿಷ್ಠ ನೂರು ರೂ., ವ್ಯಕ್ತಿಯೋರ್ವ ಕನಿಷ್ಠ ಹತ್ತು ರೂ. ನೀಡಬೇಕು. ಉಳಿದಂತೆ ಗರಿಷ್ಠ ಅವರವರ ಸಾಮರ್ಥಕ್ಕನುಸಾರ ನೀಡಬಹುದು. ಜನವರಿ 15 ರಿಂದ 45 ದಿನಗಳ ಕಾಲ ನಿಧಿ ಸಂಗ್ರಹ ಅಭಿಯಾನ ನಡೆಯಲಿದೆ ಎಂದು ಅಯೋಧ್ಯೆಯ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರು, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ವಿಶ್ವಹಿಂದು ಪರಿಷತ್ ಮಂಗಳೂರು ಕಾರ್ಯಾಲಯದಲ್ಲಿ ಶುಕ್ರವಾರ ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ನಿಧಿ ಸಮರ್ಪಣಾ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರ ಕನಸು ನನಸು ಮಾಡುವತ್ತ ಹಿಂದು ಸಮಾಜ ಈ ಕಾರ್ಯದಲ್ಲಿ ಭಾಗಿಯಾಗಬೇಕು. ಗೋ ಹತ್ಯೆ ನಿಷೇಧ ಕೂಡಲೇ ಜಾರಿಯಾಗಬೇಕು. ಸಬೂಬು ಹೇಳಿ ಈ ತೀರ್ಮಾನಕ್ಕೆ ತಡೆ ಆಗಬಾರದು. ಗೋ ವಂಶ ಉಳಿವಿಗೆ ಬಲವಾದ ಕಾನೂನು ರೂಪಿಸಬೇಕು ಎಂದರು.
ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್, ವಾಮನ ಶೆಣೈ, ಪ್ರೊ.ಎಂ.ಬಿ ಪುರಾಣಿಕ್ ಮೊದಲಾದವರು ಉಪಸ್ಥಿತರಿದ್ದರು. ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು ಹಾಜರಿದ್ದರು.
ವಿಜಯವಾಣಿ ಮುಖಪುಟ ವರದಿಗೆ ಶ್ಲಾಘನೆ:
ವಿಜಯವಾಣಿ ಪತ್ರಿಕೆಯ ಮುಖಪುಟದ ಹೆಂಗಸರೇ ಹುಷಾರ್ ವರದಿ ಉಲ್ಲೇಖಿಸಿದ ಪೇಜಾವರ ಶ್ರೀ ಮಹಿಳೆಯರನ್ನು ಆರ್ಥಿಕ, ದೈಹಿಕವಾಗಿ ಶೋಷಣೆ ಮಾಡುವುದನ್ನು ತಡೆಯಲು ಸರ್ಕಾರ ಕಠಿಣವಾದ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಪತ್ರಿಕೆ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿದೆ. ಅದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.