ಹೊನ್ನಾವರ: ನೈಸರ್ಗಿಕ ಸೌಂದರ್ಯದಿಂದ ಪ್ರವಾಸೋದ್ಯಮದಲ್ಲಿ ಪ್ರಸಿದ್ಧಿ ಪಡೆದಿರುವ ತಾಲೂಕಿನ ಅಪ್ಸರಕೊಂಡ ಗ್ರಾಮದಲ್ಲಿ ಪ್ರತಿ ಮಳೆಗಾಲದಲ್ಲಿ ಗುಡ್ಡ ಕುಸಿತ ಸಂಭವಿಸುತ್ತಿದೆ. ಈಗ ಮತ್ತೆ ರಸ್ತೆ ಅಂಚಿನ ಗುಡ್ಡದ ಮಣ್ಣು ಶಿಥಿಲಗೊಂಡಿದ್ದು, ಕುಸಿಯುವ ಆತಂಕ ಎದುರಾಗಿದೆ.
ಅಪ್ಸರಕೊಂಡ ಕಡಲತೀರಕ್ಕೆ ನಿತ್ಯ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಈ ಸ್ಥಳಕ್ಕೆ ಹೋಗುವ ರಸ್ತೆಯ ಅಂಚಿನಲ್ಲಿರುವ ಗುಡ್ಡ ಯಾವಾಗ ಕುಸಿಯುವುದೋ ಎಂಬ ಆತಂಕ ನಿರ್ವಣವಾಗಿದೆ. ಈ ರಸ್ತೆಯ ಕೆಳಗಡೆ 50ಕ್ಕೂ ಅಧಿಕ ಮನೆಗಳಿದ್ದು, ಗುಡ್ಡ ಕುಸಿತ ಸಂಭವಿಸಿದರೆ ತುಂಬಾ ತೊಂದರೆಯಾಗಲಿದೆ. ಈ ರಸ್ತೆ ಮೂಲಕ ಪ್ರವಾಸಿಗರಷ್ಟೇ ಅಲ್ಲದೆ ಈ ಗ್ರಾಮದ ವಿದ್ಯಾರ್ಥಿಗಳು ಶಾಲಾ- ಕಾಲೇಜ್ಗಳಿಗೆ, ಸಾರ್ವಜನಿಕರು ಕೃಷಿ ಕೆಲಸಕ್ಕೆ, ವ್ಯಾಪಾರ- ವಹಿವಾಟಿಗೆ ಸಂಚಾರ ನಡೆಸುತ್ತಾರೆ.
ಕಳೆದ ಎರಡು ತಿಂಗಳ ಹಿಂದೆ ಇಲ್ಲಿನ ಗುಡ್ಡ ಕುಸಿದು ರಸ್ತೆ ಸಂಪರ್ಕ ಬಂದ್ ಆಗಿತ್ತು. ಅಲ್ಲದೆ, ಈ ಸ್ಥಳದ ಸಮೀಪ ಇನ್ನೊಂದು ಕಡೆ ಕೆಲವು ತಿಂಗಳ ಹಿಂದೆ ಗುಡ್ಡದಿಂದ ಬೃಹದಾಕಾರದ ಬಂಡೆ ಬಿದ್ದು ಬೈಕ್ ಜಖಂ ಆಗಿ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿತ್ತು. ಆಗ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಅನಾಹುತವಾಗುವ ಮುನ್ನ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಸೂಕ್ತ ಪರಿಹಾರ ಕಲ್ಪಿಸಬೇಕಾಗಿದೆ.
ಅಪ್ಸರಕೊಂಡದಲ್ಲಿ ಗುಡ್ಡ ಕುಸಿತ ಆಗುತ್ತಿದೆ. ಸಮಸ್ಯೆ ಬಗೆಹರಿಸಲು ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೆ ಎಚ್ಚೆತ್ತು ಸಮಸ್ಯೆ ಬಗೆಹರಿಸಬೇಕು.
| ತಿಮ್ಮಪ್ಪ ಗೌಡ ಸ್ಥಳಿಯ ನಿವಾಸಿ