ಬಸವಕಲ್ಯಾಣ: ಸಸ್ತಾಪುರ ಬಂಗ್ಲಾ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಂಬAಧಿಕರ ಮದುವೆ ಸಂಭ್ರಮದಲ್ಲಿ ಭಾಗವಹಿಸಿ ಬೈಕ್ನಲ್ಲಿ ವಾಪಸಾಗುತ್ತಿದ್ದ ದಂಪತಿ ಮೃತಪಟ್ಟಿದ್ದು, ಅದೃಷ್ಟವಶಾತ್ ಜತೆಗಿದ್ದ ಎರಡು ವರ್ಷದ ಮಗು ಬದುಕುಳಿದಿದೆ. ಬೇರೆ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಮಗು ಬೈಕ್ ಮೇಲಿಂದ ಹಾರಿ ಬಿದ್ದಿದ್ದು, ಕಿಂಚಿತ್ತೂ ಗಾಯಗಳಾಗದೆ ಸುರಕ್ಷಿತವಾಗಿದೆ.
ಜೋಗೆವಾಡಿಯ ಗುಂಡಪ್ಪ ಚಿಟ್ಟಂಪಲ್ಲೆ(33) ಹಾಗೂ ಪತ್ನಿ ಸುಜಾತಾ(29) ಮೃತರು. ಮೂರು ವರ್ಷದ ಶ್ರೀಹರಿ ಬದುಕುಳಿದ ಮಗು. ತೀವ್ರ ಗಾಯಗೊಂಡಿದ್ದ ಗುಂಡಪ್ಪ ಅವರನ್ನು ಬಸವಕಲ್ಯಾಣ ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದರೆ, ಪತ್ನಿ ಸುಜಾತಾ ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ.
ಜೋಗೆವಾಡಿಯ ಗುಂಡಪ್ಪ ವಾರದಿಂದ ಪತ್ನಿ ತವರು ಹುಮನಾಬಾದ್ ತಾಲೂಕಿನ ಹುಡಗಿ ಗ್ರಾಮದಲ್ಲಿದ್ದರು. ಭಾನುವಾರ ಬೆಳಗ್ಗೆ ಸಂಬಂಧಿಕರ ಮದುವೆಯಲ್ಲಿ ಭಾಗವಹಿಸಲು ಬೈಕ್ನಲ್ಲಿ ಕೊಂಗೇವಾಡಿಗೆ ಬಂದಿದ್ದರು. ಮದುವೆ ಮುಗಿದ ನಂತರ ಹುಡಗಿಗೆ ತೆರಳುವಾಗ ಅವಘಡ ಸಂಭವಿಸಿದೆ.
ಬಸವಕಲ್ಯಾಣ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ರಾತ್ರಿ ಗುಂಡಪ್ಪ ಅವರ ಪಾರ್ಥಿವ ಶರೀರ ಗ್ರಾಮಕ್ಕೆ ತರಲಾಗಿತ್ತು. ಸೋಮವಾರ ಸಂಜೆ 4ಕ್ಕೆ ಶವಸಂಸ್ಕಾರ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಮಧ್ಯರಾತ್ರಿ 2ರ ಸುಮಾರಿಗೆ ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿ ಸುಜಾತಾ ಸಹ ಕೊನೆಯುಸಿರೆಳೆದಿದ್ದರಿಂದ ಮಧ್ಯಾಹ್ನ ಮೃತದೇಹ ಗ್ರಾಮಕ್ಕೆ ತಂದ ಬಳಿಕ ದಂಪತಿ ಅಂತ್ಯಸಂಸ್ಕಾರ ಒಂದೇ ಸಮಯಕ್ಕೆ ಒಂದೇ ಕಡೆ ನೆರವೇರಿಸಲಾಗಿದೆ.
ಜೋಗೆವಾಡಿಯಲ್ಲಿರುವ ಗುಂಡಪ್ಪ ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ತಂದೆ-ತಾಯಿಯನ್ನು ಕಳೆದುಕೊಂಡ ಮಗು ಶ್ರೀಹರಿ ಯಾವುದರ ಅರಿವು ಇಲ್ಲದಂತಿತ್ತು.
ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ಸಿದ್ದರಾಯ ಬೆಳ್ಳೂರಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜೋಗೆವಾಡಿಯಲ್ಲಿ ನಡೆದ ದಂಪತಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಶಾಸಕ ಶರಣು ಸಲಗರ, ಕುಟುಂಬದವರಿಗೆ ಸಾಂತ್ವನ ಹೇಳಿ ಮೃತನ ತಂದೆಗೆ ವೈಯಕ್ತಿಕವಾಗಿ ಒಂದು ಲಕ್ಷ ರೂ.ನೆರವು ನೀಡಿದರು. ಸರ್ಕಾರದಿಂದಲೂ ಸೂಕ್ತ ಪರಿಹಾರ ಮತ್ತು ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ.