ಚಿತ್ರದುರ್ಗ: ಗಣಿಬಾಧಿತ ಪ್ರದೇಶಗಳಲ್ಲಿ ಅದಿರು ಸಾಗಣೆ ಲಾರಿಗಳ ಸಂಚಾರ ಸ್ಥಗಿತಕ್ಕೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.
ಗಣಿಗಾರಿಕೆ ಪ್ರದೇಶಗಳಾದ ಭೀಮಸಮುದ್ರ, ಬೊಮ್ಮೇನಹಳ್ಳಿ, ಕಡ್ಲೆಗುದ್ದು ಗ್ರಾಮಗಳಲ್ಲಿ ಗಾಳಿ, ನೀರಿನ ಗುಣಮಟ್ಟ ಕುಸಿದು ಜನರ ಆರೋಗ್ಯ ಹದಗೆಡುತ್ತಿದೆ. ಈ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರ ಸಂಖ್ಯೆ ಅಧಿಕವಿದೆ. ಕಳೆದ ಜೂನ್ 1ರಿಂದ ಇದುವರೆಗೆ ಲಾರಿಗಳ ಸಮಚಾರ ನಿಷೇಧಿಸಲಾಗಿತ್ತು ಎಂದು ಗಮನ ಸೆಳೆದರು.
ಆದರೆ, ಈಚೆಗೆ ಅದಿರು ತುಂಬಿದ ಲಾರಿಗಳ ಸಂಚಾರಕ್ಕೆ ಪರವಾನಗಿ ಕೊಡಲಾಗಿದೆ. ಅದಿರು ಸಾಗಿಸಲು ರೈಲ್ವೆ ಮಾರ್ಗವಿದ್ದರೂ ರಸ್ತೆ ಮಾರ್ಗದಲ್ಲಿ ಲಾರಿಗಳ ಸಂಚರಿಸುತ್ತಿರುವುದು ಸರಿಯಲ್ಲ. ಇದರಿಂದ ಜನರಿಗೆ ಆಗುತ್ತಿರುವ ತೊಂದರೆಗೆ ಜಿಲ್ಲಾಡಳಿತ ಹಾಗೂ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹೊಣೆ ಹೊರಬೇಕಾಗಿರುತ್ತದೆ ಎಂದು ಎಚ್ಚರಿಸಿದರು.
ಆದ್ದರಿಂದ ಕೂಡಲೇ ಅದಿರು ತುಂಬಿದ ಲಾರಿಗಳ ಸಂಚಾರ ನಿಷೇಧಿಸಬೇಕು ಎಂದು ಒತ್ತಾಯಿಸಿದರು. ಜಿಲಾಧ್ಯಕ್ಷ ಬಿ.ಇ.ಜಗದೀಶ್, ರಾಮಣ್ಣ, ರವಿ, ಲೋಕೇಶ್, ಹುಲ್ಲೂರು ರಾಜಣ್ಣ, ಲೋಹಿತ್ ಇದ್ದರು.