ದಾವಣಗೆರೆ: ಪಾಲಿಕೆ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ವ್ಯಾಪಾರಸ್ಥರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್ ಹೇಳಿದರು.
ದೇಶದಲ್ಲಿ ಪ್ರತಿವರ್ಷ 13.50 ಲಕ್ಷ ಜನರು ತಂಬಾಕು ಉತ್ಪನ್ನಗಳ ಸೇವನೆಯಿಂದ ಅಕಾಲಿಕ ಮರಣ ಹೊಂದುತ್ತಿದ್ದು, ಇದರ ದುಷ್ಪರಿಣಾಮ ತಡೆಗಟ್ಟಲು ಕೋಟ್ಪಾ ಅನುಷ್ಠಾನ ಸೇರಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಂಬಾಕು ಉತ್ಪನ್ನಗಳ ಮಾರಾಟಗಾರರು ಪಾಲಿಕೆಯಿಂದ ಅರ್ಜಿ ನಮೂನೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಸೆ.29ರೊಳಗೆ ಅರ್ಜಿ ಸಲ್ಲಿಸಬೇಕು. ಪ್ರತ್ಯೇಕ ಪರವಾನಗಿ ಪಡೆಯದೆ ಉತ್ಪನ್ನಗಳ ಮಾರಾಟ ಮಾಡುವ ವ್ಯಾಪಾರಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಮಾರಾಟಗಾರರು ಪರವಾನಗಿ ಪಡೆಯಲು ಕೋಟ್ಪಾ ಪ್ರಕಾರ ಹಲವು ನಿಯಮ ಪಾಲಿಸುವುದು ಕಡ್ಡಾಯ. ತಂಬಾಕು ನಿಯಂತ್ರಣಕ್ಕೆ ಅನಧಿಕೃತ ಮಾರಾಟಗಾರರ ಮೇಲೆ ಪ್ರತಿವರ್ಷ 48 ದಾಳಿ ನಡೆಸಿ ದಂಡ ವಿಧಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಅಲ್ಲದೇ ತಂಬಾಕು ದುಷ್ಪರಿಣಾಮಗಳ ಕುರಿತು ಶಾಲಾ ಮಕ್ಕಳಿಗೆ ಅರಿವು ಹಾಗೂ ಗುಲಾಬಿ ಆಂದೋಲನ ಮೊದಲಾದ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪಾಲಿಕೆ ಸಮುದಾಯ ಆರೋಗ್ಯಾಧಿಕಾರಿ ಡಾ.ಸುಧೀಂದ್ರ, ಶಿವನಕೆರೆ ಬಸವಲಿಂಗಪ್ಪ, ರಮೇಶ್ ಪಾಟೀಲ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.