ಶ್ರೀನಗರ: ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಜೈರಾ ವಾಸಿಮ್ ಕಾಶ್ಮೀರದ ಸದ್ಯದ ಪರಿಸ್ಥಿತಿಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ನಮ್ಮ ಸ್ವಾತಂತ್ರ್ಯಗಳ ಮೇಲೆ ನಿರ್ಬಂಧ ಹೇರಲು ಅತ್ಯಂತ ಸುಲಭವಾದ ಜಗತ್ತಿನಲ್ಲಿ ಕಾಶ್ಮೀರಿಗಳು ಬಳಲುತ್ತಿದ್ದಾರೆ ಎಂದು ನಟಿ ಇನ್ಸ್ಟಾಗ್ರಾಂನಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಆಗಸ್ಟ್ 5ರಂದು ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ನಂತರ ಇದೇ ಮೊದಲನೇ ಬಾರಿಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಶ್ರೀನಗರ ಮೂಲದ ನಟಿ ಜೈರಾ ವಾಸಿಮ್ ಕೇಂದ್ರ ಸರ್ಕಾರದ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ.
“ಕಾಶ್ಮೀರಿಗಳು ಭರವಸೆಗಳೇ ಇಲ್ಲದ ಹತಾಶೆಯ ಬದುಕನ್ನು ಬದುಕುತ್ತಿದ್ದಾರೆ. ನಮ್ಮ ಸ್ವಾತಂತ್ರ್ಯದ ಮೇಲೆ ನಿರ್ಬಂಧಗಳನ್ನು ಹೇರುವುದು ಸುಲಭವಾಗಿರುವ ಜಗತ್ತಿನಲ್ಲಿ ಕಾಶ್ಮೀರಿಗಳು ಬದುಕುತ್ತಿದ್ದಾರೆ. ನಮ್ಮ ಜೀವನ ಮತ್ತು ಇಚ್ಛಾಶಕ್ತಿಯನ್ನು ನಿರ್ದೇಶಿಸುವ ಮತ್ತು ನಿಯಂತ್ರಿಸುವಂತಹ ಜಗತ್ತಿನಲ್ಲಿ ನಾವು ಏಕೆ ಬದುಕಬೇಕು? ನಮ್ಮ ಧ್ವನಿಯನ್ನು ಮೌನಗೊಳಿಸುವುದು ಅಷ್ಟು ಸುಲಭವಾಗಿದೆಯೇ? ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಅಷ್ಟು ಸುಲಭವೇ? ನಮ್ಮ ಇಚ್ಛೆಗೆ ವಿರುದ್ಧವಾಗಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ನಮ್ಮ ಅಭಿಪ್ರಾಯವನ್ನು ಹೇಳಲು, ನಮ್ಮ ಅಸಮ್ಮತಿಗಳನ್ನು ತಿಳಿಸಲು ನಮಗೇಕೆ ಅವಕಾಶವಿಲ್ಲ? ನಮ್ಮ ದೃಷ್ಟಿಕೋನ ಸರಿ ಇಲ್ಲ ಎಂದು ಕಂಡಿದ್ದೇ ಆದಲ್ಲಿ ಅದನ್ನು ಬದಲಾಯಿಸುವ ಬದಲು ಖಂಡಿಸುವುದೇಕೆ? ಗಲಾಟೆ, ಗಲಭೆಯಿಲ್ಲದೆ ಸರಳ ಜೀವನವನ್ನು ಮಾಡುವುದಕ್ಕೂ ಅವಕಾಶವಿಲ್ಲವೇ? ಕಾಶ್ಮೀರಿಗಳು ಯಾವಾಗಲೂ ಬಿಕ್ಕಟ್ಟು, ದಿಗ್ಭಂಧನ ಮತ್ತು ಗಲಾಟೆಗಳನ್ನೇ ನೋಡುತ್ತಿರಬೇಕೇ? ಅವರಿಗೂ ಹೃದಯ, ಮನಸ್ಸಿಲ್ಲವೇ?” ಎಂದು ಸಾಲು ಸಾಲು ಪ್ರಶ್ನೆಯನ್ನು ಕೇಳಿದ್ದಾರೆ.
ಈ ರೀತಿಯ ಉತ್ತರವಿಲ್ಲದ ಪ್ರಶ್ನೆಗಳು ನೂರಾರಿವೆ ಎಂದಿರುವ ನಟಿ, ಇವೇ ತಮ್ಮನ್ನು ನಿರಾಶೆಗೊಳಿಸುತ್ತಿವೆ ಎಂದು ಹೇಳಿದ್ದಾರೆ. ಇಲ್ಲಿನ ಸದ್ಯದ ಪರಿಸ್ಥಿತಿ ಯಾರಿಗೂ ತಿಳಿದಿಲ್ಲ. ಇಲ್ಲಿನ ಪರಿಸ್ಥಿತಿಗೆ ಮಾಧ್ಯಮಗಳು ಗುಲಾಬಿ ವರ್ಣವನ್ನು ಹಚ್ಚಿ ಮುಚ್ಚಿಟ್ಟಿದ್ದಾವೆ. ಅದನ್ನು ನಂಬಬೇಡಿ. ನಮ್ಮ ಧ್ವನಿಯನ್ನು ಹತ್ತಿಕ್ಕಿ ನಮ್ಮನ್ನು ಮೌನಗೊಳಿಸಲಾಗಿದೆ. ಇದು ಇನ್ನು ಎಷ್ಟು ಸಮಯ ಮುಂದುವರೆಯುತ್ತದೆ ಎನ್ನುವುದು ತಿಳಿದಿಲ್ಲ ಎಂದು ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.
ದಂಗಲ್ ಸಿನಿಮಾದಲ್ಲಿ ಗೀತಾ ಫೋಗಾಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಜೈರಾ, 2019ರಲ್ಲಿ ದಿ ಸ್ಕೈ ಈಸ್ ಪಿಂಕ್ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು. ಧರ್ಮೀಯ ಕಾರಣಗಳಿಂದ ತಾವು ಚಿತ್ರರಂಗದಿಂದ ದೂರ ಉಳಿಯುತ್ತಿರುವುದಾಗಿ ಇನ್ಸ್ಟಾಗ್ರಾಂನಲ್ಲಿ ತಿಳಿಸಿ ಸಿನಿಮಾ ರಂಗದಿಂದ ದೂರ ಸರಿದಿದ್ದರು. 2017ರಲ್ಲಿ ದಂಗಲ್ ಸಿನಿಮಾದಲ್ಲಿ ನಿರ್ವಹಿಸಿದ ಪಾತ್ರಕ್ಕೆ ಆಕೆಗೆ ನ್ಯಾಷನಲ್ ಫಿಲಂ ಫೇರ್ ಅವಾರ್ಡ್ ಲಭಿಸಿತ್ತು. (ಏಜೆನ್ಸೀಸ್)