ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಚಿತ್ರದ ಬಿಡುಗಡೆ ಯಾವಾಗ ಎಂದು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದ್ದು, ಏಪ್ರಿಲ್ ಒಂದರಂದು ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬರೀ ಕನ್ನಡವಷ್ಟೇ ಅಲ್ಲ, ತೆಲುಗಿನಲ್ಲೂ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ‘ಡಾರ್ಲಿಂಗ್’ ಕೃಷ್ಣ ಈಗ ‘ಮಿಸ್ಟರ್ ಬ್ಯಾಚುಲರ್’
‘ಯುವರತ್ನ’ ಚಿತ್ರವು 2018ರ ಡಿಸೆಂಬರ್ 12ರಂದು ಪ್ರಾರಂಭವಾಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷ ಏಪ್ರಿಲ್ 24ರ ಹೊತ್ತಿಗೆ ಡಾ. ರಾಜಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಯುವರತ್ನ’ ಚಿತ್ರವು ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್ಡೌನ್ನಿಂದಾಗಿ ಚಿತ್ರದ ಬಿಡುಗಡೆ ಅನಿರ್ಧಿಷ್ಟವಾಗಿ ಮುಂದಕ್ಕೆ ಹೋಯಿತು.
ಇನ್ನು ಲಾಕ್ಡೌನ್ ಮುಗಿದ ನಂತರ ಬಾಕಿ ಇದ್ದ ಎರಡು ಹಾಡುಗಳ ಚಿತ್ರೀಕರಣವಾಯಿತು. ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಮುಗಿಯುತ್ತಾ ಬಂದಿವೆ. ಮುಂದಿನ ಮೂರು ತಿಂಗಳುಗಳಲ್ಲಿ ಚಿತ್ರದ ಪ್ರಚಾರವನ್ನು ಭರ್ಜರಿಯಾಗಿ ಮಾಡಿ, ಏಪ್ರಿಲ್ ಒಂದರಂದು ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ಚಿತ್ರತಂಡದ್ದು.
ಇದನ್ನೂ ಓದಿ: ಶ್ರೀಮುರಳಿಗೆ ತೆಲುಗು ಚಿತ್ರರಂಗಕ್ಕೆ ವೆಲ್ಕಮ್ ಮಾಡಿದ ಜಗಪತಿ ಬಾಬು
ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಜೊತೆಗೆ ಧನಂಜಯ್, ಸಯೇಷಾ ಸೆಹ್ಗಲ್, ದಿಗಂತ್, ಸೋನು ಗೌಡ ಮುಂತಾದವರು ಅಭಿನಯಿಸಿದ್ದು, ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ ಸಂತೋಷ್ ಆನಂದರಾಮ್. ಇನ್ನು ವಿಜಯ್ಕುಮಾರ್ ಕಿರಗಂದೂರು ಈ ಚಿತ್ರವನ್ನು ತಮ್ಮ ಹೊಂಬಾಳೆ ಫಿಲಂಸ್ನಡಿ ನಿರ್ಮಾಣ ಮಾಡಿದ್ದಾರೆ.