ಮಥುರ: ತಮ್ಮ ನಾಯಿಯನ್ನು ಬಲೂನಿಗೆ ಕಟ್ಟಿ ಆಕಾಶದಲ್ಲಿ ಹಾರಿಸಿದ್ದಕ್ಕಾಗಿ ಕೆಲವು ತಿಂಗಳ ಹಿಂದೆ ಪ್ರಾಣಿ ಹಿಂಸೆಯ ಆರೋಪದಡಿ ಬಂಧಿತರಾಗಿದ್ದ ದೆಹಲಿಯ ಯೂಟ್ಯೂಬರ್ ಗೌರವ್ ಶರ್ಮಾ ಇದೀಗ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೃಂದಾವನದ ‘ನಿಧಿವನ ರಾಜ್’ ದೇವಾಲಯದಲ್ಲಿ ರಾತ್ರಿ ವೇಳೆ ವಿಡಿಯೋ ಶೂಟ್ ಮಾಡಿದ್ದಕ್ಕಾಗಿ ಅವರನ್ನು ಮಥುರಾ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಕೃಷ್ಣ ದೇವಾಲಯ ನಿಧಿವನ ರಾಜ್ಗೆ ರಾತ್ರಿ ಹೊತ್ತು ಯಾರೂ ಪ್ರವೇಶಿಸುವಂತಿಲ್ಲ. ಈ ಸಮಯದಲ್ಲಿ ಭಗವಾನ್ ಕೃಷ್ಣ ಮತ್ತು ರಾಧೆ ಆ ಜಾಗದಲ್ಲಿ ರಾಸಲೀಲೆ ಆಡುತ್ತಾರೆ ಎಂಬುದು ಜನರ ನಂಬಿಕೆ. ನವೆಂಬರ್ 6 ರ ರಾತ್ರಿ ಶರ್ಮಾ ಮತ್ತು ಅವರ ಸಹಾಯಕರು ದೇವಾಲಯದ ಗೋಡೆ ಹಾರಿ ಒಳಹೊಕ್ಕು ಅಲ್ಲಿ ವಿಡಿಯೋ ಚಿತ್ರೀಕರಿಸಿದ್ದರು. ಆ ಪವಿತ್ರ ಸ್ಥಳವನ್ನು ವಿಡಿಯೋಗ್ರಾಫರ್ಗಳು ಶೂಸ್ ಹಾಕಿಕೊಂಡು ಹೊಕ್ಕಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ನಕಲಿ ಲೈಸೆನ್ಸ್ ಕೊಟ್ಟು ಪೊಲೀಸ್ ಇಲಾಖೆ ಸೇರಿದ್ದ 12 ಜನ ಡಿಸ್ಮಿಸ್
ಅಂದಿನ ವಿಡಿಯೋವನ್ನು ತಮ್ಮ ‘ಗೌರವ್ಜೋನ್’ ಎಂಬ 4 ಮಿಲಿಯನ್ ಸದಸ್ಯರುಳ್ಳ ಯೂಟ್ಯೂಬ್ ಚಾನೆಲ್ನಲ್ಲಿ ಶರ್ಮಾ ನ.9 ರಂದು ಶೇರ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೇವಾಲಯದ ಅರ್ಚಕರು ಪೊಲೀಸರಿಗೆ ದೂರು ನೀಡಿದ್ದು, ಐಪಿಸಿ ಸೆಕ್ಷನ್ 295 ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 ರಡಿ ಎಫ್ಐಆರ್ ದಾಖಲಿಸಲಾಯಿತು. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಗೌರವ್ ಶರ್ಮ ತಮ್ಮ ವಿಡಿಯೋವನ್ನು ಡೆಲೀಟ್ ಮಾಡಿದ್ದರು. ಆದಾಗ್ಯೂ, ದೂರಿನ ಹಿನ್ನೆಲೆಯಲ್ಲಿ ಮಥುರಾ ಪೊಲೀಸರು ಅವರನ್ನು ನ.13 ರಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)
ಕೊನೆಯುಸಿರೆಳೆದ ಮಹಾಲಕ್ಷ್ಮೀ ದೇವಸ್ಥಾನದ ಆನೆ; ದುಃಖದಲ್ಲಿ ಗ್ರಾಮಸ್ಥರು
‘ಲಾಕ್ಡೌನ್ ಮಾಡಲು ಸಿದ್ಧ, ಆದರೆ…’ – ಸುಪ್ರೀಂ ಮುಂದೆ ದೆಹಲಿ ಸರ್ಕಾರ