ಮದ್ದೂರು: ಹಾಲಿ ಐಪಿಎಲ್ ಋತು ಅನೇಕ ಕಾರಣಗಳಿಗೆ ಹೆಚ್ಚು ಸದ್ದು ಮಾಡುತ್ತಿದ್ದು ಈ ಮಧ್ಯೆ ತಂಡಗಳ ಪರ ಕ್ರಿಕೆಟ್ ಬೆಟ್ಟಿಂಗ್ ಕೂಡ ಜೋರಾಗಿ ನಡೆಯುತ್ತಿದ್ದು ಹಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಇದೀಗ ಪ್ರಕರಣ ಒಂದರಲ್ಲಿ ಬೆಟ್ಟಿಂಗ್ ಹಃಣ ನೀಡುವ ಸಂಬಂಧ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು ಹಣ ಗೆದ್ದ ಯುವಕನನ್ನು ಸೌದೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಬೊಆರಪುರ ಸಮೀಪ ಇರುವ ವಿ.ಸಿ.ನಾಲೆ ಬಳಿ ನಡೆದಿದೆ.
ಬೆಟ್ಟಿಂಗ್ ಗೀಳು
ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆ ಗ್ರಾಮದ ಪುನೀತ್(28) ಬೆಟ್ಟಿಂಗ್ ಗೀಳಿಗೆ ಬಲಿಯಾದ ಯುವಕ. ಐಪಿಎಲ್ ಶುರುವಾದಾಗಿನಿಂದಲೂ ಪುನೀತ್ ಬೆಟ್ಟಿಂಗ್ನಲ್ಲಿ ತೊಡಗಿಸಿಕೊಂಡಿದ್ದು ಹಣ ಕಟ್ಟಿ ಗೆಲುವು ಕಂಡಿದ್ದರು.
ಗುರುವಾರ ರಾತ್ರಿ ಪುನೀತ್ ತಾವು ಗೆದ್ದ ಹಣ ನೀಡುವಂತೆ ಬೋರಾಪುರದ ಶರತ್ ಹಅಗು ಮಂಜು ಬಳಿ ಕೇಳಿಕೊಂಡಿದ್ದಾರೆ. ಈ ವೇಳೆ ಯುವಕರ ಗುಂಪು ತಾವು ವಿ.ಸಿ.ನಾಲೆ ಬಳಿ ಇದ್ದು ಅಲ್ಲಿಗೆ ಬರುವಂತೆ ಪುನೀತ್ಗೆ ಸೂಚಿಸಿದ್ದಾರೆ. ಸ್ಥಳಕ್ಕೆ ತೆರಳಿದ ಪುನೀತ್ ತಮ್ಮ ಹಣ ನೀಡುವಂತೆ ಯುವಕರ ಗುಂಪಿಗೆ ಹೇಳಿದ್ದಾರೆ.
ಇದನ್ನೂ ಓದಿ: VIDEO| ನೋಡ ನೋಡುತ್ತಿದ್ದಂತೆ ಬಡಿದಾಡಿಕೊಂಡ ಪ್ರಯಾಣಿಕರು; ಕಾರಣ ನಿಗೂಢ ಎಂದ ಪೊಲೀಸರು
ಹಣ ಕೇಳಿದ್ದಕ್ಕೆ ಹಲ್ಲೆ
ಈ ವೇಳೆ ಏಕಾಏಕಿ ಸೌದೆಯಿಂದ ಯುವಕರ ತಂಡ ಪುನೀತ್ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಪುನೀತ್ರನ್ನು ಕೆ.ಎಂ.ಡೊಡ್ಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಪುನೀತ್ ಕೊನೆಯುಸಿರು ಎಳೆದಿದ್ದಾರೆ.
ಮದ್ದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ನಡೆದ 24 ಘಂಟೆಗಳ ಒಳಗೆ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.