More

    ಯುವತಿ ಆತ್ಮಹತ್ಯೆ

    ಹುಣಸೂರು: ಪಾಲಕರು ನಿಶ್ಚಯಿಸಿದ್ದ ವರನನ್ನು ಧಿಕ್ಕರಿಸಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದ ವಧು, ಪ್ರಿಯಕರನ ಮೋಸಕ್ಕೆ ಸಿಲುಕಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಾಲೂಕಿನ ಬಿಳಿಕೆರೆ ಹೋಬಳಿ ಶ್ಯಾನುಭೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಮಹೇಶ್-ಶಾಂತಮ್ಮ ದಂಪತಿ ಪುತ್ರಿ ರಂಜಿತಾ(19) ಆತ್ಮಹತ್ಯೆಗೆ ಶರಣಾದ ಯುವತಿ. ಕೆ.ಆರ್.ನಗರ ತಾಲೂಕು ಗೌಡನಹಳ್ಳಿಯ ವರನೊಂದಿಗೆ ರಂಜಿತಾಳ ವಿವಾಹ ಫೆ.18ರಂದು ಬಿಳಿಕೆರೆಯ ಮಹದೇಶ್ವರ ದೇವಸ್ಥಾನದಲ್ಲಿ ನಡೆಯಬೇಕಿತ್ತು. ಮದುವೆಯೂ ನಿಂತು ಪ್ರಿಯಕರನೂ ಕೈಕೊಟ್ಟ ಪರಿಣಾಮ ಯುವತಿ ನೇಣಿಗೆ ಶರಣಾಗಿದ್ದಾಳೆ.

    ರಂಜಿತಾಳನ್ನು ಮದುವೆಯಾಗುವುದಾಗಿ ಫೆ.14ರಂದು ಅದೇ ಗ್ರಾಮದ ವಿವಾಹಿತ ವೇಣುಗೋಪಾಲ ನಂಬಿಸಿ ಕೇರಳಕ್ಕೆ ಕರೆದೊಯ್ದು ದೈಹಿಕವಾಗಿ ಬಳಸಿಕೊಂಡು ಕಿರುಕುಳ ನೀಡಿ ಮರಳಿ ಊರಿಗೆ ಬರುವ ವೇಳೆ ನಂಜನಗೂಡು ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.

    ವೇಣುಗೋಪಾಲ ನಂಬಿಸಿ ಮೋಸ ಮಾಡಿದ್ದು, ಆತನ ಕೃತ್ಯಗಳಿಗೆ ಮಹೇಶ್ ಸಹಕಾರ ನೀಡಿದ್ದಾನೆ ಎಂದು ರಂಜಿತಾ ಫೆ.21ರಂದು ಬಿಳಿಕೆರೆ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಇದಾದ ನಂತರ ರಂಜಿತಾಳನ್ನು ಮೈಸೂರಿನ ಶಕ್ತಿಧಾಮದಲ್ಲಿ ಇರಿಸಲಾಗಿತ್ತು.

    ಶಿವರಾತ್ರಿ ಹಬ್ಬಕ್ಕಾಗಿ ಮಗಳನ್ನು ಪಾಲಕರು ಮನೆಗೆ ಕರೆತಂದಿದ್ದರು. ಆದರೆ ರಂಜಿತಾ ಮಾ.12ರಂದು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೂಡಲೇ ಕೆ.ಆರ್.ನಗರ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮೃತಪಟ್ಟಿದ್ದು ದೃಢಪಟ್ಟಿದೆ ಎಂದು ತಂದೆ ಮಹೇಶ್ ಬಿಳಿಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮವಹಿಸಿರುವುದಾಗಿ ಇನ್ಸ್‌ಪೆಕ್ಟರ್ ಲೋಲಾಕ್ಷಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts