ಮುಂಬೈ: ನಟ ಸುಶಾಂತ್ ಸಿಂಗ್ ಸಾವಿನ ಬೆನ್ನಲ್ಲೇ ಬಾಲಿವುಡ್ನಲ್ಲಿ ಸ್ವಜನ ಪಕ್ಷಪಾತ(ನೆಪೋಟಿಸಂ), ವ್ಯಕ್ತಿ ಪ್ರಾಬಲ್ಯದ ಬಗ್ಗೆ ಚರ್ಚೆಯಾಗುತ್ತಿದೆ. ಹಲವು ನಟ, ನಟಿಯರು ಬಾಲಿವುಡ್ನಲ್ಲಿರುವ ನೆಪೋಟಿಸಂ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅಲ್ಲಿನ ಕೆಟ್ಟ ಪರಿಸ್ಥಿತಿಯನ್ನು ಹೊರಹಾಕುತ್ತಿದ್ದಾರೆ.
ಇ ದೀಗ ಗಾಯಕ ಸೋನು ನಿಗಂ ಅವರೂ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಈ ನೆಪೋಟಿಸಮ್, ವ್ಯಕ್ತಿ ಪ್ರಾಬಲ್ಯಕ್ಕೆ ತುತ್ತಾದವರು ಕೇವಲ ನಟ, ನಟಿಯರಷ್ಟೇ ಅಲ್ಲ. ಗಾಯಕ, ಗಾಯಕಿಯರಿಗೂ ಇದೇ ರೀತಿ ಚಿತ್ರಹಿಂಸೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಸೋನು ನಿಗಂ, ಬಾಲಿವುಡ್ನಲ್ಲಿ ಮ್ಯೂಸಿಕ್ ಮಾಫಿಯಾ ಕೂಡ ಇದೆ ಎಂದಿದ್ದಾರೆ. ನಾನು, ನನ್ನಂತಹ ಹಲವು ಗಾಯಕ ವೃತ್ತಿಗೆ ತಡೆ ಒಡಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ.
ನಾನೂ ಕೂಡ ನಟನೋರ್ವನ ಪ್ರಾಬಲ್ಯ, ದಬ್ಬಾಳಿಕೆಗೆ ಒಳಗಾದವನು ಎಂದಿರುವ ಸೋನು ನಿಗಂ, ಯಾರ ಹೆಸರನ್ನೂ ಹೇಳಲಿಲ್ಲ. ಬಾಲಿವುಡ್ನ್ನು ನಿಯಂತ್ರಿಸುತ್ತಿರುವ ಓರ್ವ ನಟನತ್ತ ಇತ್ತೀಚೆಗೆ ಹಲವರು ಬೆರಳು ತೋರಿಸುತ್ತಿದ್ದಾರೆ. ಅದೇ ವ್ಯಕ್ತಿಯಿಂದ ನಾನೂ ಕೂಡ ಸಂಕಷ್ಟಕ್ಕೀಡಾಗಿದ್ದೇನೆ. ನಾನು ಹಾಡಬಾರದು ಎಂಬುದು ಆ ನಟನ ಹಠ. ನಾನು ಮಾತ್ರವಲ್ಲ, ಅರಿಜಿತ್ ಸಿಂಗ್ಗೂ ಇದೇ ಸ್ಥಿತಿ ಎದುರಾಗಿದೆ. ಹೀಗೆ ಇನ್ನೊಬ್ಬರ ಬದುಕಲ್ಲಿ ಯಾಕೆ ಹಿಡಿತ ಸಾಧಿಸಬೇಕು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಈಗ ನಟ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೋಡುತ್ತಿರಿ..ಬಾಲಿವುಡ್ನಲ್ಲಿ ಇದೇ ಕೆಟ್ಟ ಸಂಸ್ಕೃತಿ ಮುಂದುವರಿದರೆ, ಮ್ಯೂಸಿಕ್ ಇಂಡಸ್ಟ್ರಿಯಲ್ಲೂ ಆತ್ಮಹತ್ಯೆಗಳಾಗುತ್ತವೆ. ಗಾಯಕ ಸೂಸೈಡ್ ಮಾಡಿಕೊಳ್ಳಬಹುದು, ಗೀತರಚನೆಕಾರ, ಸಂಯೋಜಕ ಹೀಗೆ ಯಾರಾದರೂ ಆತ್ಮಹತ್ಯೆ ದಾರಿ ಹಿಡಿಯಬಹುದು. ಅತಿ ಶೀಘ್ರದಲ್ಲೇ ಆ ಸುದ್ದಿಯನ್ನೂ ನೀವು ಕೇಳುವಂತಾಗಬಹುದು ಎಂದು ಹೇಳಿದ್ದಾರೆ.
ಸಿನಿಮಾ ಕ್ಷೇತ್ರಕ್ಕಿಂತ ದೊಡ್ಡ, ಪ್ರಾಬಲ್ಯಯುತವಾದ ಮಾಫಿಯಾಗಳು ಮ್ಯೂಸಿಕ್ ಕ್ಷೇತ್ರದಲ್ಲಿವೆ. ಇಲ್ಲಿನ ಸಂಪೂರ್ಣ ನಿಯಂತ್ರಣ ಇಬ್ಬರ ಕೈಯಲ್ಲಿದೆ. ಆ ಇಬ್ಬರದ್ದೂ ಸ್ವಂತ ಕಂಪನಿಗಳೇ ಇವೆ. ಯಾರು ಹಾಡಬೇಕು..ಯಾರು ಹಾಡಬಾರದು ಎಂಬುದನ್ನೂ ಅವರೇ ನಿರ್ಧರಿಸುತ್ತಾರೆ ಎಂದು ಸೋನು ಆರೋಪಿಸಿದ್ದಾರೆ.
ಏನೋ ಆಸೆ ಇಟ್ಟುಕೊಂಡು ಬರುವ ಹೊಸಬರಿಗೆ ಈ ಮಾಫಿಯಾಗಳನ್ನು ಎದುರಿಸಿ, ನೆಲೆಕಾಣುವುದೇ ದೊಡ್ಡ ಸಮಸ್ಯೆಯಾಗುತ್ತಿದೆ. ನಾನು ಅಂಥವರೊಂದಿಗೆ ಮಾತನಾಡಿದ್ದೇನೆ. ಒಳ್ಳೊಳ್ಳೆ ಗಾಯಕರು ಇದ್ದಾರೆ. ನಿರ್ಮಾಪಕರು, ನಿರ್ದೇಶಕರು, ಸಂಗೀತ ಸಂಯೋಜಕರು ಅಂಥವರೊಂದಿಗೆ ಕೆಲಸ ಮಾಡಲು ಇಚ್ಛಿಸುತ್ತಾರೆ. ಆದರೆ ಅದರೆಡು ಮಾಫಿಯಾ ಕಂಪನಿಗಳು ಅವರಿಗೆ ಅವಕಾಶ ನಿರಾಕರಿಸುತ್ತವೆ. ಇದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ ಎಂದು ವಿವರಿಸಿದ್ದಾರೆ.
ನನಗಂತೂ ಇಂಥ ಕೆಟ್ಟ ಅನುಭವ ಸಾಕಷ್ಟು ಬಾರಿ ಆಗಿದೆ. ನನ್ನನ್ನು ಹಾಡುಗಳ ರಿಕಾರ್ಡಿಂಗ್ಗೆ ಕರೆಯುತ್ತಾರೆ. ಆದರೆ ನಂತರ ಬೇರೆ ಯಾರೋ ಕಲಾವಿದರು ಆ ಹಾಡನ್ನು ಡಬ್ ಮಾಡುತ್ತಾರೆ. 1989ರಿಂದ ಇಂಡಸ್ಟ್ರಿಯಲ್ಲಿದ್ದೇನೆ. ನನಗೇ ತುಂಬ ಬೇಜಾರಾಗುತ್ತದೆ. ಅದರಲ್ಲೂ ಹೊಸಬರು, ಕನಸು ಹೊತ್ತು ಬರುವವರಿಗೆ ಹೀಗೆ ನಿರಾಸೆಯಾದರೆ ಹೇಗೆ ಸಹಿಸಿಯಾರು. ಹೆಚ್ಚೆಚ್ಚು ಜನ ಸಾವಿನ ದಾರಿ ಹಿಡಿಯುತ್ತಾರೆ ಎಂದಿದ್ದಾರೆ. (ಏಜೆನ್ಸೀಸ್)