ವಿಜಯಪುರ : ಸದೃಢ ಆರೋಗ್ಯಕ್ಕೆ ಯೋಗ ಸಹಕಾರಿ. ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು. ಜೀವನದಲ್ಲಿ ಯೋಗ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದು ಮಹಾನಗರ ಪಾಲಿಕೆ ನೂತನ ಸದಸ್ಯೆ ಸುಮಿತ್ರಾ ಜಾಧವ ಹೇಳಿದರು.
ನಗರ ಹೊರವಲಯದ ಸ್ಫೂರ್ತಿ ಆಯುರ್ಗ್ರಾಮ ಆಸ್ಪತ್ರೆಯಲ್ಲಿ ಬುಧವಾರ ಆಯೋಜಿಸಿದ್ದ ‘ಯೋಗ ನಿರೋಗ’ ಉಚಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಯೋಗ ಪುರಾತನ ಪದ್ಧತಿಯಾದರೂ ಈವರೆಗೂ ಮಹತ್ವ ಪಡೆದುಕೊಂಡು ಬಂದಿದೆ. ಅದೇ ತೆರನಾಗಿ ಆಯುರ್ವೇದ ಪದ್ಧತಿ ಕೂಡ ಸಾಕಷ್ಟು ಮಹತ್ವ ಪಡೆದಿದ್ದು, ಪ್ರಪಂಚದಾದ್ಯಂತ ಹರಡುತ್ತಿದೆ. ಈ ಪದ್ಧತಿಗಳಿಂದ ಉತ್ತಮ ಆರೋಗ್ಯ ಹೊಂದಬಹುದೆಂದು ಅವರು ತಿಳಿಸಿದರು.
ಡಾ. ರಾಜು ಬೆಳಗಾವಿ ಮಾತನಾಡಿ, ಪ್ರತಿ ಗುರುವಾರದಂದು ಆಸ್ಪತ್ರೆ ವತಿಯಿಂದ ಬೆಳ್ಳಗೆ 6 ಕ್ಕೆ ಉಚಿತವಾಗಿ ಯೋಗ ನಿರೋಗ ಕಾರ್ಯಕ್ರಮದಡಿ ಸಾರ್ವಜನಿಕರಿಗೆ ಉಚಿತ ತರಬೇತಿ ನೀಡಲಾಗುವುದು. ಇದರ ಸದುಪಯೋಗ ಪಡೆಯಬೇಕೆಂದರು.
ವೈದ್ಯೆ ಲಕ್ಷ್ಮಿ ರಾಜು ಬೆಳಗಾವಿ ಸ್ವಾಗತಿಸಿದರು. ಧೂತಪೌಡೇಶ್ವರ ಆಯುರ್ವೇದ ಔಷಧ ಕಂಪನಿ ಪ್ರತಿನಿಧಿ ಕುಮಾರ ಪುಜಾರಿ ನಿರೂಪಿಸಿದರು. 200ಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು. ನೂತನ ಸದಸ್ಯೆ ಸುಮಿತ್ರಾ ರಾಜು ಜಾಧವ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.