ಚಿಕ್ಕಮಗಳೂರು: ಜಿಲ್ಲಾದ್ಯಂತ ನಾಲ್ಕು ದಿನಗಳಿಂದ ಮುಂಗಾರು ಚುರುಕಾಗಿದ್ದು, ಇನ್ನು 3-4 ದಿನ ಉತ್ತಮವಾಗಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದ್ದು, ಜಿಲ್ಲಾದ್ಯಂತ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ನಾಲ್ಕು ದಿನಗಳಿಂದ ವಿವಿಧ ತಾಲೂಕುಗಳಲ್ಲಿ ಮಳೆ ಆರ್ಭಟ ಜೋರಾಗಿದೆ. ಶೃಂಗೇರಿ, ಕೊಪ್ಪ, ಮೂಡಿಗೆರೆ, ಕಳಸ ತಾಲೂಕುಗಳಲ್ಲಿ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ವಾರ್ಷಿಕ 1833 ಮಿಮೀ. ವಾಡಿಕೆ ಮಳೆಯಾಗಬೇಕಿತ್ತು. ಇಲ್ಲಿಯವರೆಗೆ ಶೇ.52 ಮಳೆಯಾಗಿದೆ. ಒಂದು ತಿಂಗಳ ಮುಂಚೆ ಪ್ರಾರಂಭವಾಗಬೇಕಿದ್ದ ಮುಂಗಾರು ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ.
ಜಿಲ್ಲೆಯ ಕೈಮರ-ಲಿಂಗದಹಳ್ಳಿ ರಸ್ತೆಯ ಎರೇಹಳ್ಳ ಸಮೀಪ ಗಾಳಿ-ಮಳೆಗೆ ಮರ ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು ನದಿಗಳು ತುಂಬಿ ಹರಿಯುತ್ತಿವೆ. ಕಡೂರು, ತರೀಕೆರೆ, ಬೀರೂರು ಭಾಗದಲ್ಲಿ ಕಡಿಮೆ ಮಳೆಯಾಗಿದೆ.