ಯಳಂದೂರು: ಪಟ್ಟಣ ಹಾಗೂ ತಾಲೂಕಿನಾದ್ಯಂತ ಜನತಾ ಕರ್ಫ್ಯೂಗೆ ವ್ಯಾಪಕ ಬೆಂಬಲದೊಂದಿಗೆ ಸಂಪೂರ್ಣ ಸ್ತಬ್ಧವಾಗಿತ್ತು.
ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟು, ಹೋಟೆಲ್, ರಸ್ತೆಬದಿಯ ಪೆಟ್ಟಿ ಅಂಗಡಿಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್ಗಳು ಬಂದ್ ಆಗಿದ್ದವು.
ಜತೆಗೆ ಖಾಸಗಿ, ಸರ್ಕಾರಿ ಬಸ್ಗಳ ಸೇವೆ ಸ್ಥಗಿತಗೊಂಡಿತ್ತು. ಆಸ್ಪತ್ರೆ, ಮೆಡಿಕಲ್ ಸ್ಟೋರ್ ಹೊರತುಪಡಿಸಿ ಇತರ ಸೇವೆಗಳು ಇರಲಿಲ್ಲ. ಬಸ್ ನಿಲ್ದಾಣ, ಬಳೇಪೇಟೆ, ಕೆ.ಕೆ. ರಸ್ತೆ ಸೇರಿದಂತೆ ಇತರ ಪ್ರದೇಶಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ಗ್ರಾಮಗಳಲ್ಲೂ ಬೆಂಬಲ: ತಾಲೂಕಿನ ವಿವಿಧ ಗ್ರಾಮಗಳಲ್ಲೂ ಜನತಾ ಕರ್ಫ್ಯೂಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಪ್ರಸಿದ್ಧ ವನ್ಯಧಾಮ ಬಿಳಿಗಿರಿರಂಗನಬೆಟ್ಟದಲ್ಲೂ ಪ್ರವಾಸಿಗರು ಕಾಣಸಿಗಲಿಲ್ಲ. ಈಗಾಗಲೇ ಬೆಟ್ಟಕ್ಕೆ ಸ್ಥಳೀಯರನ್ನು ಹೊರತು ಪಡಿಸಿ ಬೇರಡೆಯಿಂದ ಆಗಮಿಸುವವರಿಗೆ ನಿಷೇಧಿಸಲಾಗಿದೆ. ಚೆಕ್ಪೋಸ್ಟ್ಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರವಾಸಿಗರಿಗೆ ಸ್ಕ್ರೀನಿಂಗ್ ತಪಾಸಣೆ ನಡೆಸುತ್ತಿದ್ದಾರೆ.
ಪತ್ರಿಕೆ ವಿತರಣೆಗೂ ಕಾಡಿದ ಕರೊನಾ: ಪಟ್ಟಣದಲ್ಲಿ ದಿನಪತ್ರಿಕೆಗಳ ವಿತರಣೆಗೂ ಕರೊನಾ ಭೀತಿ ಕಾಡಿತು. ಖಾಸಗಿ ಹಾಗೂ ಸರ್ಕಾರಿ ಬಸ್ಗಳು ಇಲ್ಲದ ಕಾರಣ ಗ್ರಾಮಾಂತರ ಪ್ರದೇಶಗಳಿಗೆ ಪತ್ರಿಕೆ ವಿತರಣೆಗೆ ವಿತರಕರು ತೆರಳಲು ಪ್ರಯಾಸ ಪಡುವ ಸ್ಥಿತಿ ನಿರ್ಮಾಣವಾಯಿತು. ಪತ್ರಿಕೆ ವಿತರಣೆಯ ಹುಡುಗರು ಕರೊನಾ ಭೀತಿಯಿಂದ ಭಾನುವಾರ ಮನೆಯಿಂದ ಹೊರಬಾರದ ಕಾರಣ ಏಜೆಂಟರೇ ಪ್ರಯಾಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು.