ನವದೆಹಲಿ: ಭಾರೀ ಮಳೆಗೆ ಯಮುನಾ ನದಿ ಉಕ್ಕಿ ಹರಿಯುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ರಸ್ತೆಗಳು ಜಲಾವೃತಗೊಂಡಿದ್ದು, ಹಲವು ಮನೆಗಳಿಗೆ ನುಗ್ಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆ ಸಮೀಪವೂ ಪ್ರವಾಹದ ಸ್ಥಿತಿ ಇದೆ.
ಹರಿಯಾಣದಲ್ಲಿರುವ ಹತ್ನಿಕುಂಡ ಡ್ಯಾಮ್ನಿಂದ ನಿರಂತರವಾಗಿ ನದಿಗೆ ನೀರು ಬಿಟ್ಟಿದ್ದರಿಂದ ಯಮುನಾ ನದಿಯ ನೀರಿನ ಮಟ್ಟ ಇಂದು ಬೆಳಗ್ಗೆ 7 ಗಂಟೆಗೆ 208.46 ಮೀಟರ್ ತಲುಪಿದೆ. ನದಿಯ ಗರಿಷ್ಠ ನೀರಿನ ಮಟ್ಟ 205 ಮೀಟರ್. ಆದರೆ, 208 ಮೀಟರ್ ದಾಟಿದ್ದು, ಅಪಾಯ ಮಟ್ಟವನ್ನು ಮೀರಿದೆ. ಇದರ ಪರಿಣಾಮ ದೆಹಲಿಯ ಮೇಲೆ ಬೀರಿದೆ.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯ 5 ಕೆಜಿಯ ಹಣ ಬಂದಿದೆಯೋ? ಇಲ್ಲವೋ? ಪರಿಶೀಲಿಸಲು ಹೀಗೆ ಮಾಡಿ…
ದೆಹಲಿ ವಿಧಾನಸಭೆ ಬಳಿಯೇ ಪ್ರವಾಹ
ಉತ್ತರ ಭಾರತದಲ್ಲಿ ಮಾನ್ಸೂನ್ ಮಳೆಯ ಅಬ್ಬರಿಸುತ್ತಿದ್ದು, ಇದರಿಂದ ಅಣೆಕಟ್ಟುಗಳು ಭರ್ತಿಯಾಗಿವೆ. ಅಲ್ಲದೆ, ಮಳೆ ಮುಂದುವರಿದಿದ್ದು, ಅನಿವಾರ್ಯವಾಗಿ ನದಿಗೆ ನೀರು ಬಿಡಲೇಬೇಕಿದೆ. ದೆಹಲಿಯ ಸಿವಿಲ್ ಲೈನ್ಸ್ ಏರಿಯಾದಲ್ಲಿರುವ ವರ್ತುಲ ರಸ್ತೆಯಲ್ಲಿ ಪ್ರವಾಹ ಉಂಟಾಗಿದೆ. ಈ ರಸ್ತೆಯು ಮಜ್ನು ಕಾ ತಿಲಾ ಜತೆ ಕಾಶ್ಮೀರಿ ಗೇಟ್ ಐಎಸ್ಬಿಟಿಯನ್ನು ಸಂಪರ್ಕಿಸುತ್ತದೆ. ಇದೀಗ ಆ ರಸ್ತೆಯನ್ನು ಬ್ಲಾಕ್ ಮಾಡಲಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ನಿವಾಸ ಮತ್ತು ದೆಹಲಿ ವಿಧಾನಸಭೆಯಿಂದ 500 ಮೀಟರ್ ದೂರದಲ್ಲಿ ಈ ಪ್ರದೇಶ ಬರುತ್ತದೆ.
ನೀರಿನ ಪ್ರಮಾಣ ಇಳಿಕೆ ನಿರೀಕ್ಷೆ
ಹರಿಯಾಣ ಬ್ಯಾರೇಜ್ನಿಂದ ಬಿಟ್ಟಿರುವ ನೀರು ಇಂದು ಮಧ್ಯಾಹ್ನ 2 ಗಂಟೆಯ ನಂತರ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಕೇದ್ರ ಜಲ ಆಯೋಗ ತಿಳಿಸಿದೆ. ಹಳೆಯ ದೆಹಲಿ ಅತ್ಯಂತ ಕೆಟ್ಟ ಪ್ರವಾಹ ಸ್ಥಿತಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನಿಗಂಬೋಧ್ ಘಾಟ್ ಸ್ಮಶಾನ ಭೂಮಿಯನ್ನು ಬಳಸದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 12 ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಇದನ್ನೂ ಓದಿ: ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ 8 ಯುವಕರ ಜತೆ ಮದ್ವೆ! ತನಿಖೆಯಲ್ಲಿ ಕಿಲಾಡಿ ಲೇಡಿಯ ಕರಾಳ ಮುಖ ಬಯಲು
ದುರ್ಬಲ ಪ್ರದೇಶಗಳಿಗೆ ಹೋಗುವುದು ನಿಷಿದ್ಧ
ಕಳೆದೆರಡು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆಯಾಗದಿದ್ದರೂ, ಹರಿಯಾಣ ಬ್ಯಾರೇಜ್ನಿಂದ ಯಮುನಾ ನದಿಗೆ ನೀರು ಬೀಡುತ್ತಿರುವ ಕಾರಣ ನದಿಯ ಸಮೀಪ ವಾಸಿಸುವ ಜನರಿಗೆ ಅಪಾರ ತೊಂದರೆಗಳು ಉಂಟಾಗಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅನೇಕ ಜನರು ತಮ್ಮ ಮನೆಗಳನ್ನು ಖಾಲಿ ಮಾಡಬೇಕಾಗಿದೆ. ಈಗಾಗಲೇ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ದುರ್ಬಲ ಪ್ರದೇಶಗಳಿಗೆ ಹೋಗುವುದನ್ನು ನಿಷೇಧಿಸಲಾಗಿದೆ.
ಯಮುನಾ ನದಿಯ ನೀರಿನ ಮಟ್ಟ ಈಗ ಸಾರ್ವಕಾಲಿಕ ಎತ್ತರದಲ್ಲಿದೆ. ಪ್ರಸ್ತುತ ಮಾನ್ಸೂನ್ನಲ್ಲಿ ರಾಜಧಾನಿ ದೆಹಲಿಯು ದಶಕಗಳಲ್ಲಿ ಅತಿ ಹೆಚ್ಚು ಮಳೆಯನ್ನು ಪಡೆದಿದೆ. (ಏಜೆನ್ಸೀಸ್)
ಅನ್ನಭಾಗ್ಯ ಯೋಜನೆಯ 5 ಕೆಜಿಯ ಹಣ ಬಂದಿದೆಯೋ? ಇಲ್ಲವೋ? ಪರಿಶೀಲಿಸಲು ಹೀಗೆ ಮಾಡಿ…
ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ 8 ಯುವಕರ ಜತೆ ಮದ್ವೆ! ತನಿಖೆಯಲ್ಲಿ ಕಿಲಾಡಿ ಲೇಡಿಯ ಕರಾಳ ಮುಖ ಬಯಲು