ಯಲಬುರ್ಗಾ: ತಾಲೂಕಿನ ಕೋನಸಾಗರ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ಕೊರತೆ ನೀಗಿಸುವಂತೆ ಒತ್ತಾಯಿಸಿ ಎಸ್ಡಿಎಂಸಿ ಪದಾಧಿಕಾರಿಗಳು ಹಾಗೂ ಪಾಲಕರು ಪಟ್ಟಣದ ಬಿಇಒ ಕಚೇರಿ ವ್ಯವಸ್ಥಾಪಕ ಪದ್ಮನಾಭಗೆ ಶುಕ್ರವಾರ ಮನವಿ ಸಲ್ಲಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಚನ್ನಪ್ಪ ಕಲ್ಲಹೊಲದ ಮಾತನಾಡಿ, ಕೋನಸಾಗರ ಪ್ರಾಥಮಿಕ ಶಾಲೆಯಲ್ಲಿ 408 ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರಿದ್ದಾರೆ. ಇದರಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗುತ್ತಿದೆ.
ಮುಖ್ಯಶಿಕ್ಷಕ ಸರ್ಕಾರದ ಯೋಜನೆಗಳು, ಸಭೆ, ಸಮಾರಂಭ ಹಾಗೂ ಶೈಕ್ಷಣಿಕ ಚಟುವಟಿಕೆಗಳ ತರಬೇತಿಗೆ ತೆರಳಿದರೆ ಶಾಲೆಯಲ್ಲಿ ಪಾಠ ಮಾಡಲು ಅಸಾಧ್ಯದ ಮಾತಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸುವಂತೆ ಈಗಾಗಲೇ ಹಲವಾರು ಬಾರಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಶಿಕ್ಷಕರ ಕೊರತೆ ನೀಗಿಸಲೆಂದು ಆಗ್ರಹಿಸಿದರು. ಪ್ರಮುಖರಾದ ಮಾರುತಿ ಹರಿಜನ, ಬಸವನಗೌಡ ಪೊಲೀಸ್ಪಾಟೀಲ್, ಹನುಮಂತ ಪೂಜಾರ, ಹನುಮಂತ ಜೂಲಕಟ್ಟಿ, ಶರಣಗೌಡ ಪಾಟೀಲ್, ಆರ್.ಎಚ್.ಸೂರಿ, ಸಂಗಪ್ಪ ಕೋರಿ ಇತರರಿದ್ದರು.