ಯಲಬುರ್ಗಾ: ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರದ ತೊಂದರೆಯಾಗದಂತೆ ಕೃಷಿ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ರೈತರಿಗೆ ಆನ್ಲೈನ್ ನೋಂದಣಿ ಮೂಲಕ ಬೀಜ ಹಾಗೂ ಗೊಬ್ಬರ ವಿತರಿಸಲಾಗುವುದು. ಹೆಸರು, ಮೆಕ್ಕೆಜೋಳ, ಸೂರ್ಯಕಾಂತಿ, ಸಜ್ಜೆ ಹಾಗೂ ಇತರ ಬೆಳೆಯ ಬಿತ್ತನೆ ಬೀಜ ಅಗತ್ಯಕ್ಕೆ ತಕ್ಕಷ್ಟು ದಾಸ್ತಾನು ಮಾಡಲಾಗಿದೆ. ಸರ್ಕಾರ ನಿಗದಿಪಡಿಸಿರುವ ದರಕ್ಕೆ ಯೂರಿಯಾ ಮತ್ತು ಡಿಎಪಿ ಗೊಬ್ಬರ ಖರೀದಿಸಬೇಕು. ಮಾರಾಟಗಾರರು ಹೆಚ್ಚಿನ ದರ ಪಡೆದರೆ ರೈತರು ಕೃಷಿ ಅಧಿಕಾರಿಗಳಿಗ ದೂರು ನೀಡಬೇಕೆಂದು ಹೇಳಿದರು.
ರೈತರು ಪರಸ್ಪರ ಅಂತರ ಕಾಯ್ದುಕೊಂಡು ಬೀಜ, ಗೊಬ್ಬರ ಪಡೆಯಬೇಕು. ಪ್ರತಿಯೊಬ್ಬರೂ ಜೀವ ರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕೆಂದು ಶಾಸಕ ಹಾಲಪ್ಪ ಆಚಾರ್ ಸಲಹೆ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ನಿಂಗಣ್ಣ ಬಿರಾದಾರ್, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ವಸಂತಕುಮಾರ ಬಾವಿಮನಿ, ಸದಸ್ಯ ಕಳಕಪ್ಪ ತಳವಾರ್, ಕೃಷಿ ಅಧಿಕಾರಿಗಳಾದ ಗೋಣಿಬಸಪ್ಪ, ಶಿವಾನಂದ ಮಾಳಗಿ, ರಾಜೇಶ್ವರಿ, ಬಿ.ಎಸ್.ಕಟ್ಟಿಮನಿ, ಬಸವರಾಜ, ಪ್ರಮುಖರಾದ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಅರವಿಂದಗೌಡ ಪಾಟೀಲ್, ಸುಧಾಕರ ದೇಸಾಯಿ, ಮಲ್ಲಣ್ಣ ನರೇಗಲ್, ಈರಪ್ಪ ಬಣಕಾರ್, ಸಿಬ್ಬಂದಿ ನಟರಾಜ ಬಿದರಿ, ಈರಪ್ಪ ಕಮ್ಮಾರ, ಕಲ್ಲಪ್ಪ ಕರಿಗೌಡ್ರ ಹಾಗೂ ಇತರರಿದ್ದರು.