ಯಲಬುರ್ಗಾ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗುರುವಾರ ಅಕಾಲಿಕ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಯಿತು. ಹಿರೇವಂಕಲಕುಂಟಾ, ಮುರಡಿ ಗ್ರಾಮದಲ್ಲಿ ವಾರದ ಸಂತೆಯ ದಿನವಾಗಿದ್ದು ತರಕಾರಿ ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಮಾರುಕಟ್ಟೆಗೆ ತಂದಿದ್ದ ವ್ಯಾಪಾರಿಗಳು ಪರದಾಡಿದರು.
ರೈತರು ಜಮೀನಿನಲ್ಲಿ ಶೇಂಗಾ ಬೆಳೆ ಕೀಳಲಾಗಿದ್ದು ಕೆಲವೆಡೆ ತೋಯ್ದಿವೆ. ಮಳೆಯಿಂದ ರಕ್ಷಣೆ ಮಾಡಲು ಹೊಟ್ಟಿನ ಬಣವೆ ಮೇಲೆ ತಾಡಪತ್ರಿ ಹೊದಿಸಲು ಪರದಾಡಿದರು. ಬಿಸಿಲಿಗೆ ಬೆಂದಿದ್ದ ಧರೆಗೆ ವರುಣ ಕೃಪೆ ತೋರಿ ತಂಪೆರೆದಿದ್ದಾನೆ.
ಹಾರಿಹೋದ ತಗಡಿನ ಶೀಟ್ಗಳು
ತಾವರಗೇರಾ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಗುರುವಾರ ಬಿರುಗಾಳಿ ಸಹಿತ ಮಳೆ ಸುರಿಯಿತು. ಮಧ್ಯಾಹ್ನ ಮೋಡ ಕವಿದ ವಾತಾವರಣ ಇತ್ತು. ನಾಲ್ಕು ಗಂಟೆಯ ಸುಮಾರಿಗೆ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಹೊತ್ತು ಸುರಿಯಿತು.
ಪಟ್ಟಣದ ಪ್ರಮುಖ ರಸ್ತೆಗಳ ಮೇಲೆ ನೀರು ಹರಿಯಿತು. ಅಲ್ಲದೆ ಮೆಣೇಧಾಳ, ನಾರಿನಾಳ, ನಂದಾಪುರ, ಮೆತ್ತಿನಾಳ, ನವಲಹಳ್ಳಿ, ಹಾಗಲದಾಳ, ಸಂಗನಾಳ, ಗಂಗನಾಳ, ಕನ್ನಾಳ ಸೇರಿದಂತೆ ಇತರ ಕಡೆ ಮಳೆ ಹನಿದಿದೆ. ರೈತರು ಜಮೀನಿನಲ್ಲಿ ಹಾಕಿಕೊಂಡಿದ್ದ ಗುಡಿಸಲು, ತಗಡಿನ ಶೆಡ್ಗಳು ಗಾಳಿಗೆ ಕಿತ್ತು ಬಿದ್ದವು.