ಕಾರವಾರ: ಏಕ ಕಾಲದಲ್ಲಿ ಎಂಟು ವೇದಿಕೆಗಳಲ್ಲಿ ಯಕ್ಷಗಾನ ಪ್ರದರ್ಶನ ತಾಲೂಕಿನ ಚೆಂಡಿಯಾದ ಒಕ್ಕಲಕೇರಿಯಲ್ಲಿ ಜನವರಿ 6 ರಂದು ಆಯೋಜನೆಯಾಗಿದೆ. ಎರಡು ಅಂತಸ್ಸಿನ ಅಟ್ಟಣಿಗೆ ಸಿದ್ಧವಾಗಿದೆ.
ಸಾಮಾನ್ಯವಾಗಿ ಎರಡು, ಮೂರು, ವೇದಿಕೆಗಳನ್ನು ಮಾಡಿ ಏಕ ಕಾಲದಲ್ಲಿ ಯಕ್ಷಗಾನ ಪ್ರದರ್ಶಿಸುವ `ಅಟ್ಟಣಿಗೆ ಯಕ್ಷಗಾನ’ ರೂಢಿಯಲ್ಲಿದೆ. ಚೆಂಡಿಯಾದ ಶೇಡಿಹೊಂಡ, ಒಕ್ಕಲಕೇರಿ ಗ್ರಾಮಸ್ಥರು ಸೇರಿ ಈ ಭಾಗದಲ್ಲಿ ಮೊದಲ ಬಾರಿಗೆ 8 ವೇದಿಕೆಯ ಅಪರೂಪದ ಯಕ್ಷಗಾನ ಆಯೋಜಿಸಿದ್ದಾರೆ.
ಒಕ್ಕಲಕೇರಿ (ಕೋಡಾರ) ಗುಡೇದೇವ ಬಾಲ ಭಕ್ತ ಮಂಡಳಿಯ ಸದಸ್ಯರು ಸೇರಿ ಸುಮಾರು 1.25 ಲಕ್ಷ ರೂ. ವೆಚ್ಚದಲ್ಲಿ ಎರಡು ಅಂತಸ್ಸಿನಲ್ಲಿ ಕಬ್ಬಿಣದ ಸರಳು, ಬಿದಿರಿನ ಗಳನ್ನು ಬಳಸಿ ಅಟ್ಟಣಿಗೆಗಳನ್ನು ಸಿದ್ಧ ಮಾಡಿದ್ದಾರೆ. ಆ ವೇದಿಕೆಗೆ ಅಭಿಮುಖವಾಗಿ ಭಾಗವತರು, ಚಂಡೆಯವರಿಗಾಗಿ ಪ್ರತ್ಯೇಕವಾಗಿ ಅಟ್ಟಣಿಗೆ ಸಿದ್ಧ ಮಾಡಿದ್ದಾರೆ.
ರಾಷ್ಟಿಷ್ಟ್ರೀಯ ಹೆದ್ದಾರಿ 66 ರಲ್ಲಿ ಪೋಸ್ಟ್ ಚೆಂಡಿಯಾ ಗಾಂವಕರ್ವಾಡ ರಸ್ತೆಯಿಂದ ಸುಮಾರು 1.5 ಕಿಮೀ ಒಳಗೆ ಕೊನೆಯ ಗ್ರಾಮ ಒಕ್ಕಲಕೇರಿಯಲ್ಲಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಕೃಷ್ಣ ದೇವರ ಮೂರ್ತಿಯ ಮಹಾ ಪೂಜೆಯ ಅಂಗವಾಗಿ ಶನಿವಾರ ರಾತ್ರಿ 10 ಗಂಟೆಯಿಂದ ಮರುದಿನ ಬೆಳಗಿನವರೆಗೆ ಜಲಂಧರ ಕಾಳಗ ಎಂಬ ಯಕ್ಷಗಾನ ಪ್ರರ್ಶನವಿದೆ.
ಇದನ್ನೂ ಓದಿ: ಶ್ರೀ ಮಹಾಸತಿ ಅಮ್ಮನವರ ಜಾತ್ರೆ 23ರಿಂದ
ಅದಕ್ಕಾಗಿ ದೋಣಿ, ವೇದಿಕೆಯ ಎದುರು ನೀರಿನ ಸರೋವರಗಳನ್ನು ನಿರ್ಮಾಣ ಮಾಡಲಾಗಿದೆ. ಊರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುವ ಎಲ್ಲ ಕುಟುಂಬಗಳು ಒಟ್ಟಾಗಿ ಸೇರಿ ಹಣ ಜೋಡಿಸಿ, ರಾತ್ರಿ ವೇಳೆ ಯಕ್ಷಗಾನ ಕಲಿತು, ಸ್ವತಃ ವೇದಿಕೆ ಕಟ್ಟಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಸ್ಥಳೀಯ ಯಕ್ಷಗಾನ ಕಾಲಾವಿದ ಸುರೇಶ ಗೌಡ ಯುವಕರಿಗೆ ಯಕ್ಷ ಹೆಜ್ಜೆಗಳನ್ನು ಹೇಳಿಕೊಡುತ್ತಿದ್ದಾರೆ.
ದೇವಲೋಕ, ವೈಕುಂಠ, ಕೈಲಾಸ, ಬ್ರಹ್ಮ ಲೋಕ, ವರುಣ ಲೋಕ ಹೀಗೆ ಪ್ರತಿ ಸನ್ನಿವೇಶಕ್ಕೆ ತಕ್ಕಂತೆ ಕಲಾವಿದರು ಒಂದೊಂದು ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಲಂಧರನಾಗಿ ವಿಶ್ವ ಎಸ್.ಗೌಡ, ಆತನ ಪತ್ನಿ ವೃಂದೆಯಾಗಿ ಶಿವಾನಂದ ಗೌಡ ಪಾತ್ರ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಇನ್ನೂ 15 ಸ್ಥಳೀಯ ಕಲಾವಿದರು ಚಂಡೆಯ ಸದ್ದಿಗೆ ಹೆಜ್ಜಾ ಹಾಕಲಿದ್ದಾರೆ. ಬಾಳಾ ಗೌಡ ಶಿರ್ವೆ ಕಾರ್ಯನಿರ್ವಹಿಸಲಿದ್ದಾರೆ.
ಕಳೆದ ಸುಮಾರು 30 ವರ್ಷಗಳಿಂದ ಕೃಷ್ಣಮೂರ್ತಿ ಪ್ರತಿಷ್ಠಾಪಿಸಿ ಸಣ್ಣ ಮಟ್ಟದಲ್ಲಿ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದೆವು. ಕಳೆದ ವರ್ಷ ಇದೇ ರೀತಿ ಅಟ್ಟಣಿಗೆಯಲ್ಲಿ 6 ವೇದಿಕೆ ಕಟ್ಟಿ ಜಲಕನ್ಯೆ ಎಂಬ ಯಕ್ಷಗಾನ ಪ್ರದರ್ಶನ ಮಾಡಿದ್ದೆವು. ಉತ್ತಮ ಸ್ಪಂದನೆ ದೊರಕಿತ್ತು. ಇದರಿಂದ ಈ ಬಾರಿ ಎತ್ತರದ ಅಟ್ಟಣಿಗೆ ಕಟ್ಟಿದ್ದೇವೆ.
ಸಂತೋಷ ಪಿ.ಗೌಡ
ತಂಡದ ಮ್ಯಾನೇಜರ್