ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ಮೂಲಕ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಯಕ್ಷಗಾನ ಮ್ಯೂಸಿಯಂ ಸ್ಥಾಪನೆಗೆ ಮುಂದಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಲಹೆ ನೀಡಿದರು.
ಭಾನುವಾರ ತಮ್ಮನ್ನು ಭೇಟಿಯಾದ ಅಕಾಡೆಮಿ ಅಧ್ಯಕ್ಷ ಡಾ.ಗೋಪಾಲಕೃಷ್ಣ ಎಲ್.ಹೆಗಡೆ ಅವರನ್ನು ಕ್ಷೇತ್ರದಲ್ಲಿ ಅಭಿನಂದಿಸಿ ಮಾತನಾಡಿದ ಅವರು, ಮ್ಯೂಸಿಯಂ ಮೂಲಕ ಹೊಸಬರಿಗೆ ಯಕ್ಷಗಾನದ ಸಮಗ್ರ ಮಾಹಿತಿ ಸಿಗುವಂತಾಗಬೇಕು. ಅಕಾಡೆಮಿಗಳು ಸಮಾಜಮುಖಿಯಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಅಕಾಡೆಮಿಯ ನೂತನ ಯೋಜನೆಗಳಾದ ರಾಜ್ಯಮಟ್ಟದ ಯಕ್ಷಗಾನ ಸಮಗ್ರ ಸಮ್ಮೇಳನ ಹಾಗೂ ವಿಶ್ವಕೋಶ ತಯಾರಿ ಆಗಲೇಬೇಕಾದ ಕಾರ್ಯ. ಇದಕ್ಕೆ ಸರ್ಕಾರ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿಯೂ ತಿಳಿಸಿದರು. ಧರ್ಮಸ್ಥಳದ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪನೆ ಮಾಡಬೇಕೆಂಬ ಅಧ್ಯಕ್ಷರ ಮನವಿಗೂ ಹೆಗ್ಗಡೆಯವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಅಕಾಡೆಮಿ ರಿಜಿಸ್ಟ್ರಾರ್ ಎಚ್.ಜಿ.ಶಿವರುದ್ರಪ್ಪ ಜತೆಗಿದ್ದರು.