ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಬಳಿ ಇರುವ ವಾಣಿ ವಿಲಾಸ ಜಲಾಶಯ ಹಾಗೂ ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಯತ್ರಿ ಜಲಾಶಯಕ್ಕೆ ಮೈಸೂರು ಮಹಾರಾಜರ ವಂಶಸ್ಥರಾದ ಯದುವೀರ್ ಹಾಗೂ ಪತ್ನಿ ತ್ರಿಶಿಖಾ ಕುಮಾರಿ ಭಾನುವಾರ ಹಂಪಿಗೆ ತೆರಳು ಮಾರ್ಗಮಧ್ಯೆ ಜಲಾಶಯಕ್ಕೆ ಭೇಟಿ ನೀಡಿ ಸೊಬಗನ್ನು ಕಣ್ತುಂಬಿಕೊಂಡಿದ್ದಾರೆ.
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಈ ಎರಡು ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಜಯಚಾಮರಾಜ ಒಡೆಯರ್ ಅವರು ತಮ್ಮ ಮನೆತನದ ಗಾಯತ್ರಿ ದೇವಿಯ ನೆನಪಿಗಾಗಿ ಜಲಾಶಯ ನಿರ್ಮಿಸಿ, ಅವರ ಹೆಸರನ್ನೇ ಇರಿಸಿದ್ದರು. ವಿವಿ ಸಾಗರ ಜಲಾಶಯಕ್ಕೆ ಕೆಂಪರಾಜಮ್ಮಣಿ ಹೆಸರನ್ನು ನಾಮಕರಣ ಮಾಡಲಾಗಿದೆ. ಅಜ್ಜಿಯ ಹೆಸರಿನ ಎರಡು ಜಲಾಶಯಗಳನ್ನು ಮೊಮ್ಮಗ ಯದುವೀರ್ ವೀಕ್ಷಣೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಯದುವೀರ್ ಮತ್ತು ತ್ರಿಶಿಖಾ ಕುಮಾರಿಯವರು ಜಲಾಶಯ ವೀಕ್ಷಿಸಿದ ಬಳಿಕ ಪೋಟೋ ತೆಗೆಸಿಕೊಂಡಿದ್ದಾರೆ. ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳಿಂದ ಜಲಾಶಯದ ವಿಸ್ತೀರ್ಣ, ನೀರಿನ ಸಾಮರ್ಥ್ಯ, ಉಪಯೋಗಗಳ ಕುರಿತು ಮಾಹಿತಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ರಾಜಮಾತೆ ಪ್ರಮೋದಾದೇವಿ, ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರು ಜೊತೆಗಿದ್ದರು.
ಹಿರಿಯೂರು ತಾಲೂಕಿನ ರೈತಾಪಿ ವರ್ಗದ ಕೃಷಿಗೆ ಅನುಕೂಲವಾಗುವಂತೆ ಹಿರಿಯೂರು ತಾಲೂಕಿನಲ್ಲಿ ಎರಡು ಜಲಾಶಯಗಳನ್ನು ನಿರ್ಮಿಸಲಾಗಿದೆ. ವಾಣಿ ವಿಲಾಸಪುರ ಬಳಿ ಇರುವ ವಾಣಿ ವಿಲಾಸ ಜಲಾಶಯ ಹಾಗೂ ಗಾಯತ್ರಿ ಜಲಾಶಯ.
ವಾಣಿವಿಲಾಸಸಾಗರ ಜಲಾಶಯ: ಚಿಕ್ಕಮಗಳೂರಿನ ಗಿರಿ ಕಂದಕಗಳಲ್ಲಿ ಹುಟ್ಟುವ ವೇದಾವತಿ ನದಿಗೆ ಅಡ್ಡಲಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಪುರದ ಬಳಿ ಮರಿಕಣಿವೆ ಅಥವಾ ವಾಣಿವಿಲಾಸಸಾಗರ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ವಾಣಿ ವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್ಪೀಸ್ ಎಂದು ಗುರುತಿಸಲಾಗಿದೆ. ಈ ಅಣೆಕಟ್ಟನ್ನು ಮೈಸೂರಿನ ಶ್ರೀ ಕೃಷ್ಣರಾಜ ಒಡೆಯರ್ IVರ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ ‘ತಾರಾ ಚಾಂದ್ ದಲಾಲ್’ ಎಂಬ ಇಂಜಿನಿಯರ್ ನೇತೃತ್ವದ ತಂಡವು ಮೈಸೂರು ದಿವಾನಗರಾಗಿದ್ದ ಶೇಷಾದ್ರಿ ಅಯ್ಯರ್ ಅವರ ನೇತೃತ್ವದಲ್ಲಿ ನಿರ್ಮಿಸಲಾಗಿದೆ.. ಅಲ್ಲದೇ ಮೈಸೂರಿನಲ್ಲಿ ಇರುವ ಕೆಆರ್ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಾಣಿವಿಲಾಸ ಸಾಗರದ ನೀಲಿನಕ್ಷೆಯೇ ಮೂಲ ಎಂದು ಹೇಳಲಾಗುತ್ತದೆ.
ಗಾಯತ್ರಿ ಜಲಾಶಯ: ಸುವರ್ಣಮುಖಿ ನದಿಗೆ ಅಡ್ಡಲಾಗಿ ಗಾಯತ್ರಿ ಜಲಾಶಯವನ್ನು 1963ರಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸುವರ್ಣಮುಖಿ ನದಿಗೆ ಅಡ್ಡಲಾಗಿ ಅತಿ ಕಡಿಮೆ ವೆಚ್ಚ ಅಂದರೆ 40 ಲಕ್ಷ ರೂಪಾಯಿ ಖರ್ಚು ಮಾಡಿ ಗಾಯತ್ರಿ ಜಲಾಶಯವನ್ನು ಕಟ್ಟಲಾಗಿದೆ. ಈ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 0.97 ಟಿಎಂಸಿ ನೀರಿನ ಸಂಗ್ರಹ ಹೊಂದಿದೆ.
ಈ ಜಲಾಶಯವು ಸುಮಾರು ಏಳು ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಜಲಾಶಯವು 145 ಅಡಿ ಎತ್ತರ ಹೊಂದಿದ್ದು, 16 ಕಿಲೋಮೀಟರು ಉದ್ದದ ಎರಡು ನಾಲೆಗಳಿವೆ. ಜಲಾಶಯದ ಒಟ್ಟು ಉದ್ದ 1021.53 ಮೀಟರ್, 9.55 ದಶಲಕ್ಷ ಘನ ಮೀಟರ್ ಹಾಗೂ ನೀರಿನ ಸಂಗ್ರಹಣಾ ಸಾಮರ್ಥ್ಯ 27.63 ದಶಲಕ್ಷ ಘನ ಮೀಟರ್ ಹೊಂದಿದೆ. ಒಟ್ಟು ಜಲಾವೃತ ಪ್ರದೇಶ 1031,00 ಕಿಮೀ ಇದ್ದು, ಸದರಿ ಯೋಜನೆಯು ಒಟ್ಟು 2305.00 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿರುತ್ತದೆ.
ಜಲಾಶಯಕ್ಕೆ ಭದ್ರಾ ನೀರು ಹರಿಸಿ: ತಾಲೂಕಿನ ಎರಡು ಜಲಾಶಯಕ್ಕೆ ಭದ್ರಾ ಮೇಲ್ದಂಡೆ ಜಲಾಶಯದಿಂದ ನೀರು ಹರಿಸಿ, ತಾಲೂಕಿನ ಸುತ್ತಮುತ್ತ ಇರುವ ಕೆರೆಗಳಿಗೆ ನೀರು ತುಂಬಿಸಬೇಕು ಎಂಬುದು ರೈತರ ಮಹದಾಸೆಯಾಗಿದೆ.
ಇಲ್ಲಿ ಸದ್ಯಕ್ಕೆ ಪಾನಿಪುರಿ ಮಾರಾಟ ನಿಷೇಧ: ಕಾರಣ ಮತ್ತೇನೂ ಅಲ್ಲ, ಇದು..