ನವದೆಹಲಿ: ವರದಕ್ಷಿಣೆ ಕಿರುಕುಳ ನೀಡಿ, ಸೊಸೆಯನ್ನು ಕೊಂದು ಸೂಟ್ಕೇಸ್ನಲ್ಲಿ ಶವ ಇರಿಸಿ ಬಿಸಾಡಲಾಗಿದೆ ಎಂಬ ಆರೋಪದಲ್ಲಿ ಸೋಮವಾರ ಬಂಧಿಸಲಾಗಿತ್ತು. ಆದರೆ, ಸೊಸೆಯ ಕುಟುಂಬದವರು ಗುರುತಿಸಿದ್ದ ಶವ ಬೇರೆಯವರದ್ದಾಗಿದ್ದು, ಸೊಸೆ ಜೀವಂತವಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಕೆಲವು ವರ್ಷಗಳ ಹಿಂದೆ ವರಿಷಾ ಮತ್ತು ಅಮೀರ್ ವಿವಾಹವಾಗಿದ್ದರು. ಇವರಿಬ್ಬರೂ ಬುಲಂದ್ಶಹರ್ನ ಇಸ್ಲಾಮಾಬಾದ್ ಪ್ರದೇಶದಲ್ಲಿ ವಾಸವಾಗಿದ್ದರು. ಇವರೊಂದಿಗೆ ಅಮೀರ್ನ ಪಾಲಕರೂ ಇದ್ದರು. ಜು.23ರಂದು ವರಿಷಾ ದಿಢೀರ್ನೆ ಕಾಣೆಯಾಗಿದ್ದಳು. ಈ ಬಗ್ಗೆ ಅಮಿರ್ ಬುಲಂದ್ಶಹರ್ ಪೊಲೀಸರಲ್ಲಿ ದೂರು ದಾಖಲಿಸಿದ್ದರು.
ಘಾಜಿಯಾಬಾದ್ನ ಸಾಹೀಬಾಬಾದ್ನಲ್ಲಿ ಜು.27ರಂದು ಸೂಟ್ಕೇಸ್ನಲ್ಲಿ ಇರಿಸಲಾಗಿದ್ದ ಮಹಿಳೆಯ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಬಂದ ವರಿಷಾ ಪಾಲಕರು ಅದು ವರಿಷಾದ್ದೇ ಎಂದು ಗುರುತಿಸಿದ್ದರು. ಈ ಹಿನ್ನೆಲೆಯಲ್ಲಿ ವರಿಷಾ ಪತಿ ಅಮೀರ್ ಮತ್ತು ಅವರ ಪಾಲಕರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಪ್ರಕರಣ ದಾಖಲಿಸಿದ್ದರು. ಇದನ್ನು ಆಧರಿಸಿ ಪೊಲೀಸರು ಅಮೀರ್ ಮತ್ತು ಅವರ ಪಾಲಕರನ್ನು ಬಂಧಿಸಿದ್ದರು.
ಇದನ್ನೂ ಓದಿ: ಐವರು ಬಾಲಕಿಯರ ಮೇಲೆ ಸತತ ಮೂರು ದಿನ ಲೈಂಗಿಕ ದೌರ್ಜನ್ಯ ಎಸಗಿದ 65ರ ಮುದುಕ
ಆದರೆ, ವರಿಷಾ ಆಲಿಗಢದಲ್ಲಿ ತಮ್ಮ ಪರಿಚಿತರ ಮನೆಯಲ್ಲಿ ಇದ್ದರು. ವರದಕ್ಷಿಣ ಹಣ ಪಡೆದುಕೊಂಡು ಬರುವಂತೆ ಅಮೀರ್ ಮತ್ತವರ ಕುಟುಂಬದವರು ಜು.22ರಂದು ವರಿಷಾರನ್ನು ಥಳಿಸಿದ್ದರು. ಅಂದು ಅವರು ಮನೆಬಿಟ್ಟು ನೋಯ್ಡಾದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದ ಅವರು, ಅಲ್ಲಿಂದ ಆಲಿಗಢದ ಸಂಬಂಧಿಕರ ಮನೆಗೆ ಹೋಗಿದ್ದರು.
ಆಲಿಗಢದಲ್ಲಿ ಇರುವಾಗ ಘಾಜಿಯಾಬಾದ್ನಲ್ಲಿ ಸೂಟ್ಕೇಸ್ನಲ್ಲಿ ದೊರೆತ ಶವ ತನ್ನದೆಂದು ತನ್ನ ಕುಟುಂಬಸ್ಥರು ಗುರುತಿಸಿರುವ ವಿಷಯ ಆಕೆಗೆ ಗೊತ್ತಾಗಿತ್ತು. ತಕ್ಷಣವೇ ಆಕೆ ಆಲಿಗಢದ ಪೊಲೀಸ್ ಠಾಣೆಗೆ ಹೋಗಿ, ತಾನೇ ವರಿಷಾ ಆಗಿದ್ದು, ತಾನು ಜೀವಂತವಾಗಿರುವುದಾಗಿ ತಿಳಿಸಿದ್ದಳು. ಅದರಂತೆ ಆಲಿಗಢದ ಪೊಲೀಸರು ಘಾಜಿಯಾಬಾದ್ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ, ಇದೀಗ ಅಮೀರ್ ಮತ್ತು ಅವರ ಪಾಲಕರು ಬಿಡುಗಡೆಗೊಂಡಿದ್ದಾರೆ.