ಹೊಸಪೇಟೆ: ಬರಹಗಾರರ ಪ್ರೋತ್ಸಾಹಕ್ಕೆ ನಗರಸಭೆ ಬಜೆಟ್ನಲ್ಲಿ ಅನುದಾನ ಮೀಸಲಿಡುವುದಾಗಿ ಪೌರಾಯುಕ್ತ ಮನ್ಸೂರ್ ಅಲಿ ಹೇಳಿದರು.
ನಗರದ ನೌಕರರ ಭವನದಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಕಲಾ ಕೇಂದ್ರ, ಶಿಳ್ಳೆಕ್ಯಾತ ಕ್ಷೇಮಾಭಿವೃದ್ಧಿ ಸಂಘ, ಪಂಡಿತ್ ಪುಟ್ಟರಾಜ ಗವಾಯಿ ಅಂಗವಿಕಲ ಕಲಾ ಸಂಘದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬರವಣಿಗೆ ಸುಲಭದ ಮಾತಲ್ಲ. ಕೇವಲ ಟೀಕೆ ಟಿಪ್ಪಣಿ ಮಾತ್ರವಲ್ಲದೆ ಸಮಾಜದ ಎಲ್ಲ ವರ್ಗವನ್ನು ತಿದ್ದುವಂತಹ ಹಲವು ಕತೆ, ಕಾದಂಬರಿಗಳ ಜತೆ ಬರಹಗಾರ ಕೂಡ ಸದಾ ಜೀವಂತವಾಗಿರುತ್ತಾನೆ ಎಂದರು. ನಗರಸಭೆಯಲ್ಲಿ ಅಂಗವಿಕಲರಿಗೆ ಇರುವ ಶೇ.5 ಮೀಸಲು ಅನುದಾನದಲ್ಲಿ ಬರಹಗಾರರಿಗೂ ಪ್ರೋತ್ಸಾಹಿಸುತ್ತೇವೆ ಎಂದರು.
ಯುವ ನಿರ್ದೇಶಕ ವಸಂತ್ ಬರೆದಿರುವ ‘ನತ್ತು ಅವಳ ಸಮುದ್ರದೊಳಗಿನ ಮುತ್ತು’ ಕಾದಂಬರಿ ಹಾಗೂ ಹಾಸನದ ಇಂಜಿನಿಯರ್ ಟಿ.ಎಂ. ಕೃಷ್ಣ್ಣಮೂರ್ತಿ ಅವರ ‘ಒಂದು ನಿಮಿಷ’ ಕವನ ಸಂಕಲನವನ್ನು ಬಿಇಒ ಸುನಂದಮ್ಮ ಬಿಡುಗಡೆ ಮಾಡಿ ಮಾತನಾಡಿದರಿ. ಲೇಖಕಿ ಸುಧಾ ಚಿದಾನಂದಗೌಡ ಕೃತಿಗಳ ಪರಿಚಯ ಮಾಡಿದರು. ಅಂತಾರಾಷ್ಟ್ರೀಯ ಕ್ರೀಡಾಪಟು ಎಚ್.ಎಲ್. ಭಾರತಿ, ಶಿಳ್ಳೆಕ್ಯಾತರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಿದ್ದು ಬೆಳಗಲ್, ಪ್ರಾಚಾರ್ಯ ಬಸವರಾಜ್ ಎಮ್ಮಿಗನೂರು, ಉಪನ್ಯಾಸಕ ಡಾ. ದಯಾನಂದ ಕಿನ್ನಾಳ್ ಇದ್ದರು.