ಬೀದರ್: ರಾಜ್ಯ ವಿಧಾನ ಪರಿಷತ್ ನಾಮ ನಿರ್ದೇಶನದಲ್ಲಿ ಕಾಂಗ್ರೆಸ್ ಪಕ್ಷ ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಕಾರ್ಯದರ್ಶಿ ರೋಹಿದಾಸ್ ಘೋಡೆ ಒತ್ತಾಯಿಸಿದರು.
ಎಡಗೈ ಸಮುದಾಯ ಸ್ವಾತಂತ್ರ್ಯ ನಂತರ ನಿರಂತರ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿದೆ. ಸಾಮಾಜಿಕ ನ್ಯಾಯದ ಆಧಾರದಲ್ಲಿ ಸಮುದಾಯಕ್ಕೆ ಸ್ಥಾನ ಕಲ್ಪಿಸಬೇಕು ಎಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಾಜಿ ಸಚಿವ ಎಚ್. ಆಂಜನೇಯ ಮಾದಿಗ ಸಮುದಾಯದ ಹಿರಿಯ ನಾಯಕರಾಗಿದ್ದಾರೆ. ಹೀಗಾಗಿ ಅವರನ್ನು ವಿಧಾನ ಪರಿಷತ್ಗೆ ನಾಮ ನಿರ್ದೇಶನ ಮಾಡಬೇಕು ಎಂದು ಬೇಡಿಕೆ ಮಂಡಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ವಿಧಾನ ಪರಿಷತ್, ನಿಗಮ, ಮಂಡಳಿಗಳಲ್ಲಿ ಸ್ಥಾನ ಕೊಡಲಾಗಿದೆ. ಪರಿಷತ್ ನಾಮ ನಿರ್ದೇಶನದಲ್ಲಿ ಕಲ್ಯಾಣ ಕರ್ನಾಟಕವನ್ನು ಪರಿಗಣಿಸುವುದಾದರೆ ನಾಲ್ಕು ದಶಕದಿಂದ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ತಮ್ಮನ್ನು ಪರಿಗಣಿಸಬೇಕು ಎಂದು ಘೋಡೆ ಆಗ್ರಹಿಸಿದರು.
ಮುಖಂಡರಾದ ಶಾಮಣ್ಣ ಬಂಬಳಗಿ, ರಮೇಶ ಕಟ್ಟಿತೂಗಾಂವ್, ದೇವಿದಾಸ, ಜೈರಾಜ್ ಹುಮನಾಬಾದ್ ಇದ್ದರು.