ಬೆಂಗಳೂರು: ಕ್ರೀಡಾಲೋಕದ ಸಾಂಪ್ರಾದಾಯಿಕ ಎದುರಾಳಿಗಳ ಕ್ರಿಕೆಟ್ ಕದನಕ್ಕೆ ಕೇವಲ 3 ದಿನವಷ್ಟೇ ಬಾಕಿ ಇದೆ. ಅ. 14ರಂದು ಗುಜರಾತಿನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಡೋ-ಪಾಕ್ ಕ್ರಿಕೆಟ್ ಕದನ ನಡೆಯಲಿದೆ. ಈಗಾಗಲೇ ಈ ಪಂದ್ಯದ ಟಿಕೆಟ್ಗಳು ಸೋಲ್ಡೌಟ್ ಆಗಿವೆ. ಮೊನ್ನೆ (ಅ.8) ಆಸ್ಟ್ರೇಲಿಯಾ ವಿರುದ್ಧ ನಡೆದ ತಂಡದ ಮೊದಲ ಪಂದ್ಯದಲ್ಲಿ ಗೆದ್ದು ಭಾರತ ಶುಭಾರಂಭ ಕಂಡಿದ್ದು, ಇದೇ ಹುಮ್ಮಸ್ಸಿನಲ್ಲಿ ಪಾಕ್ ವಿರುದ್ಧ ಗೆಲುವು ದಾಖಲಿಸಲು ತಯಾರಿ ನಡೆಸುತ್ತಿದೆ.
ಕ್ರಿಕೆಟ್ ಹುಟ್ಟುವಿನಿಂದ ಹಿಡಿದು ಇಂದಿನವರೆಗೂ ಇಂಡೋ-ಪಾಕ್ ಕದನ ರೋಚಕತೆ ಕಾಯ್ದುಕೊಂಡಿದೆ. ಅದರಲ್ಲೂ ವಿಶ್ವಕಪ್ ಕದನಗಳ ಬಗ್ಗೆಯಂತೂ ಹೇಳತೀರದು, ಐಸಿಸಿ ಟಿ20 ಮತ್ತು ಏಕದಿನ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಒಟ್ಟು 14 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಗಮನಾರ್ಹ ಸಂಗತಿ ಏನೆಂದರೆ, ಏಕದಿನ ವಿಶ್ವಕಪ್ನಲ್ಲಿ ಏಳು ಬಾರಿಯೂ ಭಾರತವೇ ವಿಜಯೋತ್ಸವ ಆಚರಿಸಿದೆ. ಟಿ20 ವಿಶ್ವಕಪ್ನಲ್ಲಿಯೂ 7 ಬಾರಿ ಉಭಯ ತಂಡಗಳು ಸೆಣಸಾಡಿದ್ದು, ಪಾಕಿಸ್ತಾನ 2021ರಲ್ಲಿ ಒಂದು ಬಾರಿ ಗೆಲುವು ದಾಖಲಿಸಿದೆ. ಎರಡು ಮಾದರಿಯಲ್ಲೂ ಭಾರತವೇ ಪಾರುಪತ್ಯ ಸಾಧಿಸಿದೆ. ಇಂಡೋ-ಪಾಕ್ ಕದನ ಅನೇಕ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಅದರಲ್ಲೊಂದು ಘಟನೆಯನ್ನು ನಾವಿಂದು ಮೆಲಕು ಹಾಕೋಣ.
1992ರ ಮಾರ್ಚ್ 4ರಂದು ಭಾರತ ಮತ್ತು ಪಾಕಿಸ್ತಾನ ಮೊಟ್ಟ ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಮುಖಾಮುಖಿಯಾದವು. ಇಂದಿಗೂ ಇದೊಂದು ಐತಿಹಾಸಿಕ ದಿನವಾಗಿ ಉಳಿದಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಈ ಟೂರ್ನಿಯನ್ನು ಆಯೋಜಿಸಿತ್ತು. ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಮತ್ತು ಪಾಕ್ ನಡುವಿನ ಪಂದ್ಯ ನಡೆಯಿತು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋತು ಭಾರತ ಹೀನಾಯ ಸ್ಥಿತಿಯಲ್ಲಿತ್ತು. ಇನ್ನೊಂದೆಡೆ ಪಾಕಿಸ್ತಾನ ಒಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಒಳ್ಳೆಯ ಸ್ಥಾನದಲ್ಲಿತ್ತು. ಆದರೂ ಭಾರತ ಗೆಲುವು ಸಾಧಿಸಿದ್ದು ಮಾತ್ರ ರಣ ರೋಚಕವಾಗಿತ್ತು. ಇದೇ ಪಂದ್ಯದಲ್ಲಿ ಪಾಕ್ ಬ್ಯಾಟ್ಸ್ಮನ್ ಜಾವೇದ್ ಮಿಯಾಂದಾದ್ ಮಾಡಿದ ಚೇಷ್ಟೆ ಇಂದಿಗೂ ನೆನಪಾಗಿ ಉಳಿದಿದೆ.
ಅಂದಿನ ಭಾರತ ತಂಡದ ನಾಯಕರಾಗಿದ್ದ ಮೊಹಮ್ಮದ್ ಅಜರುದ್ದೀನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ಈ ಪಂದ್ಯವನ್ನು 49 ಓವರ್ಗಳಿಗೆ ಕಡಿತಗೊಳಿಸಲಾಗಿತ್ತು. 5ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿದಿದ್ದ ಸಚಿನ್ ತೆಂಡೂಲ್ಕರ್, 62 ಎಸೆತಕ್ಕೆ 54 ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದಿದ್ದರು. ಇದು ವಿಶ್ವಕಪ್ನಲ್ಲಿ ಸಚಿನ್ ಅವರ ಮೊದಲ ಅರ್ಧಶತಕವಾಗಿತ್ತು. ಅಜೇಯ್ ಜಡೇಜಾ (77 ಎಸೆತಕ್ಕೆ 46 ರನ್) ಮತ್ತು ಕಪಿಲ್ ದೇವ್ (26 ಎಸೆತಕ್ಕೆ 35 ರನ್) ಉತ್ತಮ ಆಟದೊಂದಿಗೆ ಭಾರತ ನಿಗದಿತ ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 216 ರನ್ ಕಲೆಹಾಕಿತ್ತು. ಪಾಕ್ ಪರ ಲೆಗ್ ಸ್ಪಿನ್ನರ್ ಮುಸ್ತಾಕ್ ಅಹ್ಮದ್ 59 ರನ್ಗೆ 3 ವಿಕೆಟ್ ಪಡೆದು ಮಿಂಚಿದರು.
ಭಾರತ ನೀಡಿದ 217ರನ್ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ಆರಂಭದಲ್ಲಿ ಇಂಜಮಾಮ್ ಉಲ್ ಅಕ್ (2 ರನ್) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಜಾಹೀದ್ ಫಾಜಲ್ ಸಹ ಇಂಜಮಾಮ್ ಹಾದಿಯನ್ನು ಹಿಡಿದರು. 17ರನ್ಗೆ ಪ್ರಮುಖ 2 ವಿಕೆಟ್ ಕಳೆದುಕೊಂಡು ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜಾವೇದ್ ಮಿಯಾಂದಾದ್ (40) ಮತ್ತು ಆಮರ್ ಸೋಹೈಲ್ (62) ಉತ್ತಮ ಜತೆಯಾಟವಾಗಿ ತಂಡಕ್ಕೆ ಆಸರೆಯಾದರು.
ಕಿರಣ್ ಮೋರೆ ಮನವಿಗೆ ಸಿಟ್ಟಾದ ಮಿಯಾಂದಾದ್
ಮಿಯಾಂದಾದ್ ಮತ್ತು ಆಮರ್ ಸೋಹೈಲ್ ಕ್ರೀಸ್ನಲ್ಲಿ ಕಚ್ಚಿಕೊಂಡಿದ್ದರು. ಇದು ಭಾರತ ತಂಡವನ್ನು ಆತಂಕಕ್ಕೆ ದೂಡಿತ್ತು. ಹೇಗಾದರ ಇಬ್ಬರ ಜತೆಯಾಟ ಮುರಿಯಬೇಕೆಂದು ಭಾರತ ಸಾಕಷ್ಟು ತಂತ್ರಗಳನ್ನು ಪ್ರಯೋಗಿಸಿತು. ಸಚಿನ್ ತೆಂಡೂಲ್ಕರ್ ಬೌಲಿಂಗ್ ಮಾಡುವಾಗ ಪಾಕಿಸ್ತಾನಕ್ಕೆ 25 ಓವರ್ಗಳಲ್ಲಿ 85 ರನ್ ಅವಶ್ಯಕತೆ ಇತ್ತು. ಕೇವಲ 2 ವಿಕೆಟ್ ಮಾತ್ರ ಬಿದ್ದಿತ್ತು. ಗೆಲುವಿನ ಹಾದಿ ಸುಲಭವಾಗಿತ್ತು. ಆದರೆ, ವಿಕೆಟ್ ಕೀಪರ್ ಕಿರಣ್ ಮೋರೆ ಅವರ ನಿರಂತರ ಅಂಪೈರ್ ಮನವಿಯಿಂದ ಬೇಸರಗೊಂಡಿದ್ದರು. ಸ್ಟ್ರೈಕ್ನಲ್ಲಿದ್ದ ಮಿಯಾಂದಾದ್ ಅಂಪೈರ್ ಬಳಿ ಹೋಗಿ ಮೋರೆ ವಿರುದ್ಧ ದೂರು ಸಹ ನೀಡಿದ್ದರು. ಆದರೆ, ಮೋರೆ ಆರೋಪವನ್ನು ನಿರಾಕರಿಸಿದರು. ಅಲ್ಲದೆ, ಇಬ್ಬರ ನಡುವೆ ಮಾತಿನ ಚಕಮಕಿ ಸಹ ನಡೆದಿತ್ತು. ಇದೇ ಸಂದರ್ಭದಲ್ಲಿ ಸಚಿನ್ ಎಸೆದ ಚೆಂಡನ್ನು ಮಿಯಾಂದಾದ್ ಬಾರಿಸಿದಾಗ ಆ ಚೆಂಡು ಫ್ರಂಟ್ ವಿಭಾಗದಲ್ಲಿ ನಿಂತಿದ್ದ ಕ್ಷೇತ್ರ ರಕ್ಷಕನ ಕೈ ಸೇರಿತು. ಇದನ್ನು ನೋಡಿದ ಮಿಯಾಂದಾದ್ ರನ್ ಗಳಿಸುವ ಯತ್ನವನ್ನು ಮೊಟಕುಗೊಳಿಸಿ ವಾಪಸ್ ಕ್ರೀಸ್ಗೆ ಬಂದರು. ಈ ವೇಳೆ ಚೆಂಡು ಮೋರೆ ಅವರ ಕೈ ಸೇರಿತು. ಅವರು ವಿಕೆಟ್ಗೆ ಚೆಂಡನ್ನು ತಾಗಿಸಿದರು. ಆದರೆ, ಅಷ್ಟರಲ್ಲಾಗಲೇ ಮಿಯಾಂದಾದ್ ಕ್ರೀಸ್ ತಲುಪಿದರು. ಈ ವೇಳೆ ಮಿಯಾಂದಾದ್ ಅವರು ಮೂರು ಜಂಪಿಂಗ್ ಮಾಡುವ ಮೂಲಕ ಮೋರೆ ಅವರು ಅಂಪೈರ್ ಬಳಿ ಮನವಿ ಮಾಡುವ ರೀತಿಯನ್ನು ಅಣುಕಿಸಿದರು. ಈ ವೇಳೆ ಇಡೀ ಕ್ರೀಡಾಂಗಣವೂ ಸಹ ನಗೆಗಡಲಲ್ಲಿ ತೇಲಿತು.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಮಿಯಾಂದಾದ್ ಮತ್ತು ಸೊಹೈಲ್ ಅವರ ಉತ್ತಮ ಜಟೆಯಾಟದ ಹೊರತಾಗಿಯೂ ಪಾಕ್ ತಂಡ ಭಾರತದ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿತು. ಕೊನೆಯ ಎಂಟು ವಿಕೆಟ್ ಅನ್ನು ಕೇವಲ 68 ರನ್ಗೆ ಕಳೆದುಕೊಳ್ಳುವ ಮೂಲಕ 43 ರನ್ಗಳ ಅಂತರದಿಂದ ಪಾಕ್ ಸೋಲನ್ನು ಅನುಭವಿಸಿತು. (ಏಜೆನ್ಸೀಸ್)
1996ರ ವಿಶ್ವಕಪ್ ರೋಚಕ ಕ್ಷಣ: ಕನ್ನಡಿಗನನ್ನು ಕೆಣಕಿ ಜಗತ್ತಿನೆದುರು ಮುಖಭಂಗ ಅನುಭವಿಸಿತ್ತು ಪಾಕ್!
ಏಕದಿನ ವಿಶ್ವಕಪ್ 2023| ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ; ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ ಬಿಸಿಸಿಐ
Asian Games; ರಿಲಯನ್ಸ್ ಫೌಂಡೇಶನ್ ಬೆಂಬಲಿತ ಕ್ರೀಡಾಪಟುಗಳಿಗೆ 12 ಪದಕ