ಸವದತ್ತಿ: ಮೋದಿ ಅಲೆಯಲ್ಲಿಯೇ ಕಾಂಗ್ರೆಸ್ ಹೆಚ್ಚು ಮತ ಪಡೆದ ಕ್ಷೇತ್ರವಿದು. ಕಾರ್ಯಕರ್ತರೇ ಪಕ್ಷದ ಆಸ್ತಿ ಎಂದು ಕೆಪಿಸಿಸಿ ಕಾಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಸ್ಥಳೀಯ ವಡೆಯರ ಕಲ್ಯಾಣ ಮಂಟಪದಲ್ಲಿ ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಗ್ರಾಪಂ ಚುನಾವಣೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷಗಳಿದ್ದಲ್ಲಿ ಗುಂಪುಗಾರಿಕೆ ಸಹಜ. ಅದು ಇಲ್ಲಿಯೂ ಮುಂದುವರಿದಿದೆ. ಹೀಗೆ ಮುಂದುವರಿದಲ್ಲಿ ಮತ್ತೆ ಚುನಾವಣೆಯಲ್ಲಿ ಆಯ್ಕೆ ಕಠಿಣವಾಗಲಿದೆ ಎಂದು ಕಾರ್ಯಕರ್ತರನ್ನು ಎಚ್ಚರಿಸಿದರು.
ರಾಜ್ಯ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನತೆಗೆ ತಿಳಿಸಿ ಎಂದು ಶಾಸಕ ಸತೀಶ ಜಾರಕಿಹೊಳಿ ಕರೆ ನೀಡಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ವಿಧಾನಸಭಾ ಚುನಾವಣೆಗೆ ಇವೆಲ್ಲ ಮೆಟ್ಟಿಲುಗಳಾಗಿವೆ. ಪಕ್ಷದ ಗೆಲುವಿಗಾಗಿ ಕೆಳಮಟ್ಟದಲ್ಲಿ ನೀವೆಲ್ಲ ಒಂದಾಗಿದ್ದರೆ ಮಾತ್ರ ಗೆಲುವು, ಇಲ್ಲದಿದ್ದಲ್ಲಿ ಮತ್ತೆ ಇದೇ ಪರಿಸ್ಥಿತಿ. ಈ ಕ್ಷೇತ್ರದ ಕುರಿತು ಹೆಚ್ಚಿನ ಕಾಳಜಿ ವಹಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಸ್ಥಳೀಯ ಉಸ್ತುವಾರಿ ಸತೀಶ ಮೆಹರವಾಡೆ ಮಾತನಾಡಿ, ಗ್ರಾಪಂ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ಮುಖಂಡರು ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಲಿದ್ದು, ಯೋಗ್ಯ ಅಭ್ಯರ್ಥಿಗಳನ್ನು ಸೂಚಿಸುವಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡಬೇಕೆಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಡಿ.ಡಿ.ಟೋಪೋಜಿ, ಪಂಚನಗೌಡ ದ್ಯಾಮನಗೌಡರ, ಉಮೇಶ ಬಾಳಿ, ಫಕ್ಕಿರಪ್ಪ ಹದ್ದಣ್ಣವರ ಮಾತನಾಡಿದರು.
ಸಭೆ ನಡೆದ ಕೆಲ ಸಮಯದ ಬಳಿಕ ಮುಖಂಡರ ಸಮ್ಮುಖದಲ್ಲಿಯೇ ಕಾರ್ಯಕರ್ತರು ಇಲ್ಲಿ ಯಾರು ಪಕ್ಷದ ನಾಯಕರು? ಒಬ್ಬರ ಹೆಸರನ್ನಾದರೂ ವೇದಿಕೆಯಲ್ಲಿ ಬಹಿರಂಗಪಡಿಸಿ. ಯಾರಲ್ಲಿ ಸಮಸ್ಯೆ ಹೇಳಿಕೊಳ್ಳುವುದು? ಸಭೆ ನಡೆಯುವ ಕುರಿತು ಯಾರಿಗೂ ಮಾಹಿತಿ ಇಲ್ಲ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಶಾಸಕ ಆರ್.ವಿ.ಪಾಟೀಲ, ವಿಶ್ವಾಸ ವೈದ್ಯ, ಸದಾಶಿವ ಕೌಜಲಗಿ, ರವೀಂದ್ರ ಯಲಿಗಾರ, ಸೌರವ ಚೋಪ್ರಾ, ಜಿ.ಜಿ.ಕಣವಿ, ಮಹಾರಾಜಗೌಡ ಪಾಟೀಲ, ಪಂಚಪ್ಪ ಮಲ್ಲಾಡ, ಎಂ.ಬಿ.ಸವದತ್ತಿ, ಚನ್ನರಾಜ ಹಟ್ಟಿಹೊಳಿ, ಮಲ್ಲು ಜಕಾತಿ, ಹಿರೇಕುಂಬಿ, ನದಾಫ್ ಇತರರು ಇದ್ದರು.