ಹಾಸನ: ಅಣೆಕಟ್ಟು ನಿರ್ಮಾಣ ಕಾಮಗಾರಿ ಸಂದರ್ಭ ಕಾರ್ಮಿಕನೊಬ್ಬ ಎತ್ತರದಿಂದ ಕೆಳಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದು, ಗುತ್ತಿಗೆದಾರರ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಟ್ಟೆಬೆಳಗುಲಿ ಗ್ರಾಮದ ಬಳಿ ಈ ಅವಘಡ ಸಂಭವಿಸಿದೆ. ಕಟ್ಟೆಬೆಳಗುಲಿ ಗ್ರಾಮದ ಸಮೀಪ ಹರಿಯುತ್ತಿರುವ ಹೇಮಾವತಿ ನದಿಗೆ ಅಣೆಕಟ್ಟೆ ಕಟ್ಟುವ ಕಾಮಗಾರಿ ಸಂದರ್ಭ ಕೂಲಿಕಾರ್ಮಿಕ ಮಂಜೇಗೌಡ (45) ಸಾವಿಗೀಡಾಗಿದ್ದಾರೆ.
ಶ್ರೀರಾಮದೇವರ ಕಟ್ಟೆಗೆ ನಡೆಯುತ್ತಿದ್ದ ಕಾಮಗಾರಿಯಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಸುಮಾರು 20 ಅಡಿ ಎತ್ತರಕ್ಕೆ ಕೂಲಿ ಕಾರ್ಮಿಕನನ್ನು ಹತ್ತಿಸಿದ್ದರು. ಈ ವೇಳೆ ತಲೆಗೆ ಹೆಲ್ಮೆಟ್ ನೀಡಿರಲಿಲ್ಲ, ಸುರಕ್ಷತಾ ಬಲೆಯನ್ನಾಗಲಿ ಅಳವಡಿಸಿರಲಿಲ್ಲ. ಹೀಗೆ ಕಬ್ಬಿಣದ ಕಂಬಿಗಳನ್ನು ಹಿಡಿದು ಮೇಲಕ್ಕೆ ಹತ್ತಿದ್ದ ಕಾರ್ಮಿಕ ಬಿದ್ದು ಸಾವಿಗೀಡಾಗಿದ್ದಾರೆ.
ಕೂಲಿಕಾರ್ಮಿಕನ ಈ ಸಾವಿಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಂಬಂಧಿಕರ ಆಗ್ರಹ ವ್ಯಕ್ತಪಡಿಸಿದ್ದಾರೆ. ಹೊಳೆನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಎಂಥ ದುಸ್ಥಿತಿಯಲ್ಲಿದೆ ನೋಡಿ ನಿರ್ದೇಶಕ ಪುಟ್ಟಣ್ಣ ಕಣಗಾಲರ ಮನೆ!