ನವದೆಹಲಿ: ಬಿಜೆಪಿಗೆ ಪಕ್ಷಾಂತರಗೊಂಡಿರುವ ತನ್ನ ಆಪ್ತ ಜ್ಯೋತಿರಾದಿತ್ಯ ಸಿಂಧಿಯಾ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಂಧಿಯಾ ತನ್ನ ರಾಜಕೀಯ ಭವಿಷ್ಯದ ಚಿಂತೆಯಿಂದ ತನ್ನ ಆದರ್ಶಗಳನ್ನು ಬದಿಗೊತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್, ಸಿಂಧಿಯಾ ಮನಸ್ಸಿನಲ್ಲಿರುವುದಕ್ಕೂ ಹಾಗೂ ಸದ್ಯ ಹೇಳುತ್ತಿರುವ ಮಾತಿಗೂ ತುಂಬಾನೇ ವ್ಯತ್ಯಾಸವಿದೆ. ಕಾಲೇಜು ದಿನಗಳಿಂದಲೂ ನಾವಿಬ್ಬರು ಒಬ್ಬರಿಗೊಬ್ಬರು ಚೆನ್ನಾಗಿ ಅರಿತಿದ್ದೇವೆ ಎಂದರು.
ಇದೊಂದು ಸಿದ್ಧಾಂತವಾದ ಹೋರಾಟ ಎಂಬುದು ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ ಒಂದು ಬದಿಯಲ್ಲಿದ್ದರೆ, ಬಿಜೆಪಿ-ಆರ್ಎಸ್ ಇನ್ನೊಂದು ಬದಿಯಲ್ಲಿದೆ. ಸಿಂಧಿಯಾ ಕಾಲೇಜು ದಿನಗಳಲ್ಲಿ ನನ್ನೊಂದಿಗೆ ಇದ್ದಿದ್ದರಿಂದ ಅವರ ಸಿದ್ಧಾಂತ ಏನೆಂಬುದು ನನಗೆ ತಿಳಿದಿದೆ. ತನ್ನ ರಾಜಕೀಯ ಭವಿಷ್ಯದ ಬಗ್ಗೆ ಸಿಂಧಿಯಾ ಚಿಂತಿಸುತ್ತಿದ್ದರು. ಇದೀಗ ತನ್ನ ಸಿದ್ಧಾಂತವನ್ನು ಪಾಕೆಟ್ನಲ್ಲಿಟ್ಟು ಆರ್ಎಸ್ಎಸ್ನೊಂದಿಗೆ ಹೋಗಿದ್ದಾರೆ ಎಂದು ರಾಹುಲ್ ಕಿಡಿಕಾರಿದರು.
ವಾಸ್ತವವೆಂದರೆ, ಸಿಂಧಿಯಾಗೆ ಬಿಜೆಪಿಯಲ್ಲಿ ಯಾವ ಗೌರವವೂ ಸಿಗುವುದಿಲ್ಲ. ಅವರ ಹೃದಯಕ್ಕೆ ಯಾವುದೇ ಸಮಾಧಾನವೂ ದೊರೆಯುವುದಿಲ್ಲ. ನಾವಿಬ್ಬರು ಹಳೆಯ ಸ್ನೇಹಿತರು ಎಂದು ತಿಳಿಸಿದರು.
ಮಧ್ಯಪ್ರದೇಶದ ಕಮಲ್ನಾಥ್ ಸರ್ಕಾರದ ವಿರುದ್ಧ ಸಿಡಿದೆದ್ದ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಸಿಂಧಿಯಾರೊಂದಿಗೆ ಅವರ ಬೆಂಬಲಿತ ಶಾಸಕರು ಕೂಡ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದು, ಕಮಲ್ನಾಥ್ ಸರ್ಕಾರ ಪತನದ ಅಂಚಿನಲ್ಲಿದೆ. (ಏಜೆನ್ಸೀಸ್)
ಜ್ಯೋತಿರಾದಿತ್ಯ ಸಿಂಧಿಯಾರ ಕೈ ಹಿಡಿದು ಸ್ವಾಗತ ಕೋರಿದ ಅಮಿತ್ ಷಾ; ಪಕ್ಷದ ಬಲ ಹೆಚ್ಚಿತು ಎಂದ್ರು ರಾಜನಾಥ್ ಸಿಂಗ್