ನವದೆಹಲಿ: ರಾಜಸ್ಥಾನ ಸರ್ಕಾರ ಮುಂದೇನಾಗಲಿದೆ? ಸಚಿನ್ ಪೈಲಟ್ ರಾಜಿಯಾಗಲಿದ್ದಾರಾ? ಅಶೋಕ್ ಗೆಹ್ಲೋಟ್ ಜತೆ ಡಿಸಿಎಂ ಆಗಿ ಮುಂದುವರಿಯಲಿದ್ದಾರಾ? ಹೈಕಮಾಂಡ್ ಸೂಚನೆಯಂತೆ ನಾಳೆ ಸಿಎಂ ನಿವಾಸದಲ್ಲಿ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರಾ? ಎಂಬಿತ್ಯಾದಿ ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ ಡಿಸಿಎಂ ಸಚಿನ್ ಪೈಲಟ್ ಅವರ ಕಚೇರಿಯಿಂದ ಹೇಳಿಕೆಯೊಂದು ಬಿಡುಗಡೆಯಾಗಿದೆ.
ಜು.13ರಂದು ಅಶೋಕ್ ಗೆಹ್ಲೋಟ್ ನಿವಾಸದಲ್ಲಿ ಆಯೋಜಿಸಲಾಗಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿನ್ ಪೈಲಟ್ ಅವರು ಪಾಲ್ಗೊಳ್ಳುವುದಿಲ್ಲ ಎಂದು ಡಿಸಿಎಂ ಕಚೇರಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ, ಅಶೋಕ್ ಗೆಹ್ಲೋಟ್ ಅವರ ಸರ್ಕಾರ ಇನ್ನೂ ಅಸ್ಥಿರವಾಗಿದೆ. ಬಹುಮತ ಹೊಂದಿಲ್ಲ ಎಂದೂ ಹೇಳಿದೆ. ಇದನ್ನೂ ಓದಿ: ಸಿಎಂ ವಿರುದ್ಧ ಬಂಡಾಯ ಎದ್ದು ದೆಹಲಿಗೆ ತೆರಳಿದ್ದ ಸಚಿನ್ ಪೈಲಟ್ಗೆ ಕಾಂಗ್ರೆಸ್ ‘ಹೈ’ ಶಾಕ್…!
ಅಷ್ಟೇ ಅಲ್ಲ, ಸಚಿನ್ ಪೈಲಟ್ ಕೂಡ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇದನ್ನೇ ಪುನರುಚ್ಚರಿಸಿದ್ದಾರೆ. ನನ್ನ ಜತೆ ಶಾಸಕರು ಇದ್ದಾರೆ. ನಾಳಿನ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವುದಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿಯನ್ನಾಗಲಿ, ರಾಹುಲ್ ಗಾಂಧಿಯನ್ನಾಗಲಿ ನನಗೆ ಭೇಟಿಯಾಗಲು ಅವಕಾಶ ಸಿಗಲಿಲ್ಲ. ಜೈಪುರಕ್ಕೆ ಹೋಗುವ ಮಾತೇ ಇಲ್ಲ ಎಂದು ಸಚಿನ್ ಪೈಲಟ್ ತಿಳಿಸಿದ್ದಾರೆ.
ಸುಮಾರು 30 ಕಾಂಗ್ರೆಸ್ ಶಾಸಕರು ಸಚಿನ್ ಪೈಲಟ್ ಜತೆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಸಚಿನ್ ಪೈಲಟ್ ಜತೆ ದೆಹಲಿಗೆ ಹೋಗಿ, ಈಗ ಉಲ್ಟಾ ಹೊಡೆದ ಶಾಸಕರು; ನಾವು ಕಾಂಗ್ರೆಸ್ ಸೈನಿಕರು ಎಂದರು…!