ಬೆಂಗಳೂರು: ಪತಿ ಎರಡನೇ ಮದುವೆಯಾಗಿದ್ದಕ್ಕೆ ಸಿಟ್ಟು ಇಟ್ಟುಕೊಂಡಿದ್ದ ಪತ್ನಿ ಸುಪಾರಿ ಕೊಟ್ಟು ಆತನನ್ನೆ ಅಪಹರಿಸಿ 2 ಲಕ್ಷ ರೂ. ಒತ್ತೆ ಹಣಕ್ಕೆ ಬೇಡಿಕೆ ಇಟ್ಟು, ಕೃತ್ಯವನ್ನು ಸವತಿಯ ತಲೆಗೆ ಕಟ್ಟಲು ಯತ್ನಿಸಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಪಹೃತನನ್ನು ರಕ್ಷಿಸಿರುವ ಬಾಗಲಗುಂಟೆ ಪೊಲೀಸರು, ನಾಲ್ವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ವಿಶ್ವೇಶ್ವರಯ್ಯಲೇಔಟ್ ನಿವಾಸಿ ಶಾಹೀದ್ ಶೇಖ್ ರಕ್ಷಿಸಲ್ಪಟ್ಟ ಗುತ್ತಿಗೆದಾರ. ಹೆಸರುಘಟ್ಟ ನಿವಾಸಿ ಅಭಿಷೇಕ್ (26), ನಾಗಸಂದ್ರದ ಭರತ್ (25), ಜೆ.ಪಿ.ನಗರದ ಪ್ರಕಾಶ (22) ಹಾಗೂ ಬ್ಯಾಡರಹಳ್ಳಿಯ ಚೆಲುವಮೂರ್ತಿ (22) ಬಂಧಿತ ಅಪಹರಣಕಾರರು. ಆರೋಪಿಗಳಿಂದ ಕಾರು ಜಪ್ತಿ ಮಾಡಿದ್ದು, ತಲೆಮರೆಸಿಕೊಂಡಿರುವ ನಾಲ್ವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಾಯ್ಫ್ರೆಂಡ್ ಜತೆಗೆ ಸೆಕ್ಸ್ ಮಾಡಿ ಡೋಪಿಂಗ್ ಟೆಸ್ಟ್ನಲ್ಲಿ ಸಿಕ್ಕಿಬಿದ್ದ ಮಹಿಳಾ ಬಾಕ್ಸರ್! ಶಿಕ್ಷೆಯಿಂದ ಪಾರಾಗಿದ್ದೇಕೆ?
ಶಾಹೀದ್ ಶೇಖ್ ಕಟ್ಟಡ ನಿರ್ಮಾಣದ ಗುತ್ತಿಗೆದಾರರಾಗಿದ್ದು, ಪತ್ನಿ ರೋಮಾ ಶೇಖ್ ಜೊತೆ ಮಾರತ್ತಹಳ್ಳಿಯಲ್ಲಿ ನೆಲೆಸಿದ್ದ. ಈಕೆಯೊಂದಿಗೆ ಮದುವೆಯಾಗುವ ಮುಂಚೆ ಪರಿಚಯವಿದ್ದ ರತ್ನಾ ಕಾತುಮ್ ಎಂಬಾಕೆಯ ಜೊತೆಗೂ ಮದುವೆಯಾಗಿತ್ತು. ಇಬ್ಬರೊಂದಿಗೆ ಸಂಸಾರ ಮುಂದುವರಿಸಿದ್ದ. ಮೊದಲನೇ ಪತ್ನಿ ರೋಮಾ ಕ್ಷುಲ್ಲಕ ವಿಚಾರಕ್ಕೆ ಪತಿ ಶಾಹಿದ್ ಜೊತೆ ಗಲಾಟೆ ಮಾಡುತ್ತಿದ್ದಳು. ಇದೇ ಕಾರಣಕ್ಕೆ ಬೇಸತ್ತು, ಅಪರೂಪಕ್ಕೆ ಆಕೆಯ ಮನೆಗೆ ಹೋಗಿ ಬರುತ್ತಿದ್ದ. ಬಾಗಲಗುಂಟೆಯ ವಿಶ್ವೇಶ್ವರಯ್ಯಲೇಔಟ್ನಲ್ಲಿರುವ 2ನೇ ಪತ್ನಿ ರತ್ನಾ ಕಾತುಮ್ ಜೊತೆಗೆ ಹೆಚ್ಚಾಗಿ ಇರುತ್ತಿದ್ದ. (ಚಿತ್ರದಲ್ಲಿ ಎಡಕ್ಕೆ ಇರುವವಳು).
ಶಾಹೀದ್ ಶೇಖ್ ಮೊದಲನೇ ಪತ್ನಿ ರೋಮಾ ಶೇಖ್ಗೆ ಸಂಬಂಧಿಸಿದ ಒಡವೆ, ಹಣ ಹಾಗೂ ಇನ್ನಿತರ ವಸ್ತುಗಳನ್ನು 2ನೇ ಪತ್ನಿ ರತ್ನಾ ಕಾತುಮ್ಗೆ ಕೊಡುತ್ತಿದ್ದ. ಇದೇ ವಿಚಾರಕ್ಕೆ ರೋಮಾ ಪತಿ ಶಾಹೀದ್ ಮೇಲೆ ಸಿಟ್ಟು ಇಟ್ಟುಕೊಂಡಿದ್ದಳು. ಹೇಗಾದರೂ ಮಾಡಿ ರತ್ನಾಳಿಂದ ಪತಿಯನ್ನು ಬೇರ್ಪಡಿಸಬೇಕು ಎಂದು ಯೋಚಿಸಿದ್ದಳು. ಈ ಕುರಿತು ಪರಿಚಯಸ್ಥ ಸಲ್ಮಾನ್ ಎಂಬಾತನ ಜೊತೆ ಮಾತನಾಡಿ, ಪತಿಯ ಅಪಹರಣಕ್ಕೆ ಸುಪಾರಿ ಕೊಟ್ಟಿದ್ದಳು. ಪ್ರಕರಣವನ್ನು ರತ್ನಾಳ ತಲೆಗೆ ಕಟ್ಟುವ ಉದ್ದೇಶ ಹೊಂದಿದ್ದಳು.
ಇದನ್ನೂ ಓದಿ: ಪಾಗಲ್ ಪ್ರೇಮಿಯ ಪ್ರತೀಕಾರದ ಹುಚ್ಚಾಟ ಮಾಡಿರುವ ಅನಾಹುತ ಏನೆಂದು ತಿಳಿದರೆ ಶಾಕ್ ಆಗೋದ ಗ್ಯಾರಂಟಿ!
ಶಾಹಿದ್ ತನ್ನ ಸ್ನೇಹಿತನ ಜೊತೆ ಜೂ. 7ರಂದು ಎಂ.ಇ.ಐ ಬಡಾವಣೆಯ ಆರ್ಚ್ಗೆ ತರಕಾರಿ ತರಲು ಹೋಗಿದ್ದರು. ಈ ವೇಳೆ ಬಿಳಿ ಬಣ್ಣದ ಕಾರಿನಲ್ಲಿ ಹೋಗಿದ್ದ ಆರೋಪಿಗಳು, ಶಾಹೀದ್ನನ್ನು ಅಪಹರಿಸಿ ಮಾರಕಾಸದಿಂದ ಹಲ್ಲೆ ನಡೆಸಿದ್ದರು. ರೋಮಾ ಸೂಚನೆಯಂತೆ 2ನೇ ಪತ್ನಿ ರತ್ನಾಳಿಗೆ ಕರೆ ಮಾಡಿ, 2 ಲಕ್ಷ ರೂ. ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ರತ್ನಾ ಕೊಟ್ಟ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ೆನ್ ಲೊಕೇಷನ್ ಜಾಡು ಹಿಡಿದು ತನಿಖೆ ನಡೆಸಿದಾಗ, ಆರೋಪಿಗಳು ಹಾಸನದ ಸಾರಾಪುರದಲ್ಲಿರುವ ಸುಳಿವು ಸಿಕ್ಕಿತ್ತು. ಇದನ್ನು ಆಧರಿಸಿ ಸಾರಾಪುರ ತೋಟದ ಮನೆಯೊಂದರಲ್ಲಿ ಅಕ್ರಮ ಬಂಧನದಲಿಟ್ಟಿದ್ದ ಶಾಹೀದ್ನನ್ನು ರಕ್ಷಿಸಿ, ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.